Monday, June 27, 2016

ಶಿರಾಡಿಯಲ್ಲಿ ಆ ಮೂರು ಗಂಟೆಗಳು !

ಬಾಯಾರಿದ ಬಯಕೆಗಳಲಿ ಥಳಥಳಿಸುವ ನೀರು  ಕಣ್ಣಿಗೆ ಥಣ್ಣಗೆ ಮುತ್ತಿಡುತಿದೆ ಪ್ರೀತಿಯಂತ ಹಸಿರು….

ಶಿರಾಡಿ ! ನೀವು ಈ ಹೆಸರು ಕೇಳಿಯೇ ಇದ್ದೀರಿ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕಾದರೆ, 38 ಕಿಲೋಮೀಟರ್ ಗಳ ರೌದ್ರ ಸೌಂದರ್ಯವನ್ನು ಅನುಭವಿಸಲೇಬೇಕು. ಅಂದ ಹಾಗೆ, ನನಗೆ ಶಿರಾಡಿಯೇನೂ ಹೊಸದಲ್ಲ. ಎಳೆವೆಯಲ್ಲಿ ಅಮ್ಮನ ಪಲ್ಲಂಗ ಹಿಡಿದುಕೊಂಡು ಓಡಾಡಿದಷ್ಟೇ ಸಲೀಸಾಗಿ ಶಿರಾಡಿಯ ಕಾಡುಗಳಲ್ಲಿ ಕಳೆದು ಹೋದ ದಿನಗಳಿಗೇನೂ ಕಡಿಮೆ ಇಲ್ಲ. ಸರಿಯಾಗಿ ಲೆಕ್ಕ ಹಾಕಿದರೆ ಬದುಕಿನ ಕಾಲು ಭಾಗವನ್ನು ಶಿರಾಡಿಯ ತಪ್ಪಲುಗಳಲ್ಲೇ ಕಳೆದಿರಬಹುದು.

ಶಿರಾಡಿ ಅಂದ್ರೆ ಅದೇನೋ ಖುಷಿ. ಅದ್ರಲ್ಲೂ ಮಳೆ ಬಿತ್ತೆಂದರೆ ಸಾಕು. ಶಿರಾಡಿ ಇದ್ದಕ್ಕಿದ್ದಂತೆ ಬದಲಾಗಿಬಿಡುತ್ತದೆ. ಒಣಗಿದ ಗಿಡಗಳು, ಮರಗಳು ಎಲ್ಲವೂ ಅದೆಲ್ಲಿಂದಲೋ ಅದೇನೋ ಆವೇಶ ಮೈಮೇಲೆ ಬಂದತೆ, ಇದ್ದಕ್ಕಿದ್ದಂತೆ ಚಿಗಿತು ಕೂತುಕೊಳ್ಳುತ್ತವೆ. ಮುಂಗಾರಿನ ರಭಸಕ್ಕೆ ಜೋಕಾಲಿಯಾಡುತ್ತವೆ.

ಅದೆಲ್ಲಿಂದಲೋ ಧೋ.. ಧೋ… ಎನ್ನುತ್ತಾ ಓಡಿ ಬರುತ್ತದೆ ಮಳೆ… 6 ತಿಂಗಳು ದೂರ ಹೋಗಿದ್ದ ಪ್ರೇಮಿಯನ್ನು ಕಾಣಲು ಪ್ರೇಯಸಿ ತಹತಹಿಸುತ್ತಾಳಲ್ಲಾ.. ಹಾಗೇ, ಕೆಂಪು ಹೊಳೆ ಕುಣಿದು ಕುಪ್ಪಳಿಸುತ್ತಾಳೆ. ಮಳೆರಾಯನ ಆನಂದ ಭಾಷ್ಪಗಳನ್ನು ಮೊಗೆಮೊಗೆದು ತನ್ನೊಳಗೆ ಸೆಳೆದುಕೊಳ್ಳುತ್ತಾಳೆ.. ಪ್ರಶಾಂತವಾಗಿ ಪ್ರಿಯಕರನಿಗಾಗಿ ಕಾಯುತ್ತಿದ್ದ ಕೆಂಪುಹೊಳೆ ಕುಣಿಕುಣಿದು ಭೋರ್ಗರೆಯುತ್ತಾಳೆ. ಆಕೆಯ ರೌದ್ರತಾಂಡವಕ್ಕೆ ಜೀಗುಂಬೆ, ಹಕ್ಕಿ, ಕೀಟಗಳೇ ತಾಳ ತಂಬೂರಿ. ಆ ರುದ್ರನರ್ತನವನ್ನು ಹೈವೇಯಲ್ಲಿ ನಿಂತು ನೋಡಿದರೆ, ಎದೆಯೊಳಗೆ ಭಯ ತವುಡುಗಟ್ಟದಿದ್ದರೆ ಹೇಳಿ.

ಹೇಳಿ ಕೇಳಿ ಇದು ಜೂನ್. ಆಗಲೇ ಶಿರಾಡಿ ನೆನೆದು ತೊಪ್ಪೆಯಾಗಿ ಹೋಗಿದೆ. ಈಗ ಹೈವೆ ಬಿಟ್ಟು ಆಚೀಚೆ ಹೋಗುವುದು ತುಂಬಾ ರಿಸ್ಕಿ ಕೆಲಸ. ಕಾಲಿಟ್ಟಲ್ಲೆಲ್ಲಾ ಜಾರುತ್ತೆ. ಅಷ್ಟೇ ಯಾಕೆ, ಘಾಟಿ ರಸ್ತೆಯಲ್ಲಿ ಅತಿ ವೇಗದಲ್ಲಿ ನಿಮ್ಮ ಕಾರು ಚಲಾಯಿಸುವುದು ಕೂಡಾ ತುಂಬಾ ರಿಸ್ಕೇ. ಕೊಂಚ ಯಾಮಾರಿದ್ರೂ, ಯಮಪುರಿಗೆ ಗೋಲ್ಡ್ ಪಾಸ್ ಸಿಕ್ಕಿಬಿಡುತ್ತೆ. ಅಲ್ಲಿಗೆ ಹೋಗೋದಾದ್ರೆ, ಇನ್ನೊಂದು ತಿಂಗಳು ಕಾಯಿರಿ. ಮಳೆಯ ಆರಂಭದ ಅಬ್ಬರ ಕಡಿಮೆಯಾಗಿರುತ್ತದೆ. ಆದರೆ ಮಳೆ ಪ್ರಮಾಣ ಅಷ್ಟೇ ಇರುತ್ತದೆ. ಕಾಡು ಆಲ್ ಮೋಸ್ಟ್ ಸ್ವಚ್ಛವಾಗಿರುತ್ತದೆ. ಅದೇ ರೈಟ್ ಟೈಂ.

ಕಾಡಿನಲ್ಲಿ ನಡೆಯೋದೇ ರಿಸ್ಕಿ ಅಂದ್ಕೊಂಡ್ರೆ ಬಿಟ್ಟುಬಿಡಿ. ಬೆಳಗ್ಗೆ ಬೆಂಗಳೂರಿನಿಂದ 7 ಗಂಟೆಗೆ ಕಾರವಾರಕ್ಕೆ ಹೊರಡೋ ಟ್ರೈನ್ ಹತ್ತಿಕೊಳ್ಳಿ. ಸಕಲೇಶಪುರ ದಾಟಿದ ಮೇಲೆ ಅಪ್ಪಿ ತಪ್ಪಿ ಕೂಡಾ ಕಣ್ಣು ಮುಚ್ಚಿಕೊಳ್ಳಬೇಡಿ. ಮುಚ್ಚಿದ್ರೆ, ನಿಮಗೆ ಜೀವನದಲ್ಲಿ ಮತ್ತೆಂದಿಗೂ ಸ್ವರ್ಗ ಸಿಗೋದಿಲ್ಲ. ಆದ್ರೆ ಒಂದೇ ಕಂಡೀಷನ್. ನಿಮಗೆ ಪ್ರಕೃತಿಯನ್ನು ಆಸ್ವಾದಿಸೋ ಮನಸ್ಸು ಇರಬೇಕು.



ಟ್ರೇನ್ ಬೇಡ ಅಂದ್ರೆ ಕಾರು ತೆಗೆದುಕೊಂಡು ಹೊರಟುಬಿಡಿ. ಸಕಲೇಶಪುರದಿಂದ ಸ್ವಲ್ಪ ದೂರ ಹೋದರೆ ದೋಣಿಗಲ್ ಸಿಗುತ್ತದೆ. ಅಲ್ಲಿ ಬಿಸಿ ಕಾಫಿಯೋ, ಟೀಯನ್ನೋ ಸೇವಿಸಿ, ಬೋಂಡಾ ಮೆಲ್ಲುತ್ತಾ ಹೊರಟುಬಿಡಿ, ಬೇಕಿದ್ದರೆ ಕೈಯಲ್ಲೊಂದಿಷ್ಟು ಚಿಪ್ಸ್ ಪ್ಯಾಕ್ ಇರಲಿ. ಮುಂದೆ ಬರೀ ಚಳಿ. ಕಣ್ಣುಬಿಟ್ಟರೆ ಕಾಣೋದು ಹಸಿರ ಪಾತಳಿ. ಅದನ್ನು ಮನಸಾರೆ ಅನುಭವಿಸಿ.

ಬೆಂಗಳೂರು ಬಿಟ್ಟರೆ, ಭರ್ತಿ ಮೂರುಗಂಟೆಗೆಲ್ಲಾ ದೋಣಿಗಲ್ ತಲುಪಿಬಿಡುತ್ತೇನೆ. ಅಲ್ಲಿ ಹರಿಯೋ ಸಣ್ಣ ಝರಿಯಲ್ಲಿ ಮುಖಕ್ಕೆ ನೀರು ಚಿಮ್ಮಿಸಿ, ಪಕ್ಕದಲ್ಲೇ ಕಾಫಿ-ಭಜ್ಜಿ ತಿನ್ನುತ್ತಾ 15 ನಿಮಿಷ ಕಳೆದುಬಿಡುತ್ತೇನೆ. ಅಲ್ಲಿಂದಾಚೆಗೆ ನನ್ನ ಕಾರು ಯಾಕೋ ವೇಗ ಒಲ್ಲೆ ಅನ್ನುತ್ತದೆ. ಹೈವೇ ಬದಿ ಸ್ವಲ್ಪ ಗ್ಯಾಪ್ ಕಂಡ್ರೂ ಕಾರು ಸರಕ್ಕನೆ ನಿಂತುಕೊಂಡು ಬಿಡುತ್ತದೆ. 38 ಕಿಲೋಮೀಟರ್ ತಲುಪಲು ಏನಿಲ್ಲವೆಂದರೂ ನಂಗೆ ಮೂರು ಗಂಟೆ ಬೇಕೇ ಬೇಕು. ಇಲ್ಲದಿದ್ರೆ ನನ್ನ ಕಾರು, ಕ್ಯಾಮೆರಾ ಕಣ್ಣು ಎರಡೂ ಠೂ ಬಿಟ್ಟುಬಿಡುತ್ತವೆ !

ಮೊನ್ನೆಮೊನ್ನೆಯಷ್ಟೇ ಮತ್ತೆ ಶಿರಾಡಿ ಮಡಿಲಲ್ಲಿದ್ದೆ. ಧರಣಿಗೆ ಬೆಂಬಿಡದೆ ಮುಂಗಾರಿನ ಅಭಿಷೇಕವಾಗುತ್ತಿತ್ತು. ಅದು ಅಕ್ಷರಶ: ಮಹಾಮಸ್ತಕಾಭಿಷೇಕ. ಒಮ್ಮೆ ಜಿಟಿಜಿಟಿ ಮತ್ತೊಮ್ಮೆ ಧೋ ಧೋ.. ಮತ್ತೆ ಜಿಟಿಜಿಟಿ ಆ ಮೂರು ಗಂಟೆಗಳಲ್ಲಿ ಕೇಳಿಸಿದ್ದು ಅದರದ್ದೇ ಸದ್ದು. ಮೂರು ಗಂಟೆಗಳಲ್ಲಿ ಅದೆಷ್ಟು ಬಾರಿ ನೆಂದಿದ್ದೆನೋ, ಅದೆಷ್ಟು ಬಾರಿ ಮಳೆಯ ಹೊಡೆದ ತಾಳಲಾರದೆ ಕಾರಿನ ಒಳಗೆ ಮುದುಡಿ ಕೂತಿದ್ದೆನೋ… ಅಂತಹದ್ದೊಂದು ಅನುಭವಕ್ಕೆ ಮೈಮರೆತು ತುಂಬಾ ದಿನಗಳೇ ಆಗಿದ್ದವು. ಆ ಮೂರು ಗಂಟೆಗಳು ಒಂದು ವರ್ಷಕ್ಕಾಗುವಷ್ಟು ಹಸಿಹಸಿ ಉತ್ಸಾಹ ತುಂಬಿಕೊಟ್ಟಿದ್ದವು.

ಅದು ಬರೀ ಮುಂಗಾರು ಮಳೆಯಲ್ಲ…  ಜೀವೋತ್ಸವ ಗಾನ.

ಮೈಮನಗಳ ಕೊಂಬೆಯಲ್ಲಿ ಹೊಮ್ಮುವ ದನಿ ಇಂಪು. ನಾಳೆಗೆ ನನಸಾಗುವ ಕನಸಿನ ಹೂವರಳುವ ಕಂಪು.






Friday, June 24, 2016

ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ

ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ
ಟೀಂ ಇಂಡಿಯಾದಲ್ಲಿ ಮತ್ತೆ ಫ್ಯಾಬ್ 5 ಯುಗ

ಆತ ಕ್ರಿಕೆಟ್ ಜಗತ್ತಿನ ದೇವರು. ಭತರ್ಿ ಕಾಲು ಶತಮಾನ ಕಾಲ ಭಾರತೀಯ ಕ್ರಿಕೆಟ್ಟನ್ನು ಅಕ್ಷರಶ: ತನ್ನ ಭುಜದ ಮೇಲೆ ಹೊತ್ತು ಮೆರೆದ. ನೂರು ಕೋಟಿ ಜನರ ನಿರೀಕ್ಷೆಗಳ ಭಾರವನ್ನು ತನ್ನ ವಾಮನ ದೇಹದ ಮೇಲೆ ಹೊತ್ತು ಸಾಗಿದ. ಸಹಸ್ರ ಸಹಸ್ರ ರನ್ ಪೇರಿಸಿ, ಕೋಟಿ ಕೋಟಿ ಜನರ ಸಹಸ್ರ ಸಹಸ್ರ ಆಸೆಗಳನ್ನು ಈಡೇರಿಸಿದ. ಇನ್ಮೇಲೆ ನಾನು ಕ್ರಿಕೆಟ್ ಆಡಲ್ಲ ಎಂದಾಗ, ಕೊನೆಯ ಬಾರಿಗೆ ವಾಂಖೆಡೆ ಮೈದಾನದಿಂದ ಹೊರ ನಡೆದಾಗ ಅದೆಷ್ಟೋ ಲಕ್ಷ ಜನರು ಕ್ರಿಕೆಟ್ ಗೂ ಗುಡ್ ಬೈ ಹೇಳಿದರು. ದೇವರಿಲ್ಲದ ಕ್ರಿಕೆಟ್ ಧರ್ಮವನ್ನೇ ತ್ಯಜಿಸಿದರು. ಸಧ್ಯ ಭಾರತೀಯ ಕ್ರಿಕೆಟ್ ನಲ್ಲಿರುವವರೆಲ್ಲಾ ಆ ದೇವರ ಪರಮ ಭಕ್ತರಷ್ಟೇ.

ಆತ ಸಾಕ್ಷಾತ್ ಶಿವಶಂಕರ. ಬಂಗಾಳದ ವೀರಭದ್ರ. ಎದುರಾಳಿ ಸವಾಲೆಸೆದ್ರು ಸಾಕು, ಮೈದಾನದಲ್ಲಿ ಕಾಣಿಸುತ್ತಿದ್ದದ್ದು ಬರೀ ರೌದ್ರಾವತಾರ. ಮೈದಾನದಾಚೆಯೂ ಶಿವತಾಂಡವಕ್ಕೆ ಕೊರತೆ ಏನೂ ಇರಲಿಲ್ಲ. ಭಾರತೀಯ ಕ್ರಿಕೆಟಿಗರಿಗೆ ಹುಲಿಗಳು ಅಂತಾರೆ. ಆತನ ಕಾಲದಲ್ಲಿ ನಿಜಕ್ಕೂ ಅವರು ಹುಲಿಗಳೇ ಆಗಿದ್ದರು. ಲೀಡರ್ ಎಂದರೆ ಹೀಗೇ ಇರಬೇಕು ಎಂಬಂತೆ ಉದಾಹರಣೆಯಾಗಿ ನಿಂತದ್ದೇ ಆ ರಿಯಲ್ ಟೈಗರ್.

ಮೇಲಿನವರಿಬ್ಬರು ಭೋರ್ಗರೆಯುತ್ತಲೇ ಇದ್ದರು. ಅವರ ಸಿಡಿಲಬ್ಬರಕ್ಕೆ ಜಗತ್ತು ಥರಥರ ನಡುಗಿ ಹೋಗುತ್ತಿತ್ತು. ಜೊತೆಯಾಗಿ ನಿಂತಷ್ಟೂ ಹೊತ್ತು ಎದುರಾಳಿ ಪಾಳಯದಲ್ಲಿ ನೆಮ್ಮದಿ ಸುಳಿಯುತ್ತಲೇ ಇರಲಿಲ್ಲ. ಥ್ಯಾಂಕ್ ಗಾಡ್ ! ಅವರ ಉತ್ತುಂಗದ ಕಾಲದಲ್ಲಿ ಟಿ-20 ಕ್ರಿಕೆಟ್ ಹುಟ್ಟಿರಲಿಲ್ಲ. ಇದ್ದಿದ್ದರೆ, ಕ್ರಿಕೆಟ್ ಲೋಕದಲ್ಲಿ ಪ್ರಳಯ ಸೃಷ್ಟಿಯಾಗುತ್ತಿತ್ತು ! ಬೌಲಿಂಗ್ ಮಾಡಲು ಯಾರೂ ಇರುತ್ತಿರಲಿಲ್ಲ.

ಆತ ಗೋಡೆ. ಎಂತಹಾ ಬಿರುಗಾಳಿ, ಸಿಡಿಲಿನ ವೇಗದ ಬೌಲರ್ಗಳಿಗೂ ಹಿಮಾಲಯದಷ್ಟೇ ತಣ್ಣಗೆ ಅಡ್ಡ ನಿಂತ ಮಹಾ ಗೋಡೆ. ಒಂದರ್ಥದಲ್ಲಿ ಆತ ಭಾರತೀಯ ಕ್ರಿಕೆಟ್ ನ ಯುಗ ಪ್ರವರ್ತಕ. ಆತ ಭೋರ್ಗರೆಯುತ್ತಿರಲಿಲ್ಲ. ಸಮುದ್ರದ ಅಲೆಗಳಂತೆ ಶಾಂತವಾಗಿಯೇ ಅಪ್ಪಳಿಸುತ್ತಿದ್ದ. ಕ್ರೀಸಿನಲ್ಲಿದ್ದಷ್ಟೂ ಹೊತ್ತು ಮ್ಯಾಚ್ ಭಾರತದ ಕೈ ಜಾರುತ್ತಲೇ ಇರಲಿಲ್ಲ.

ಆತ ಬ್ಯಾಟ್ ಬೀಸುತ್ತಿದ್ದಷ್ಟೂ ಹೊತ್ತು ಮೈದಾನದಲ್ಲಿ ಅರಳುತ್ತಿದ್ದದ್ದು ಬರೀ ರಂಗವಲ್ಲಿಯಷ್ಟೇ. ಅಂತಹ ಕಲಾತ್ಮಕ ಮತ್ತೊಬ್ಬ ಆಟಗಾರ ಜಾಗತಿಕ ಕ್ರಿಕೆಟ್ ಗೆ ಮತ್ತೊಬ್ಬ ಸಿಕ್ಕಿಲ್ಲ. ಆ ಸ್ಟೈಲಿಶ್ ಆಟಗಾರ ಕ್ರಿಕೆಟ್ ನ ಘಟಾನುಘಟಿ ಬೌಲರ್ ಗಳಿಗೇ ಸವಾಲಾಗಿದ್ದ. ಅದರಲ್ಲೂ ಅತಿರಥರೆನಿಸಿದ ಕ್ಯಾಂಗರೂಗಳ ಪಾಲಿಗೆ ಆತ ಬಿಡಿಸಲಾರದ ಒಗಟೇ ಆಗಿಬಿಟ್ಟಿದ್ದ.

ವಿಕೆಟ್ ಬಿಟ್ಟುಕೊಡೋದ್ರಲ್ಲಿ ಮೇಲಿನ ಇಬ್ಬರೂ ಜಿಪುಣಾಗ್ರೇಸರರೇ. ಇಬ್ಬರೂ ಜೊತೆಯಾಗಿ ಪೈಪೋಟಿಗೆ ನಿಂತರೆ, ಮೈದಾನವಿಡೀ ಎದುರಾಳಿ ಬೌಲರ್ ಗಳ ಬೆವರಿನಿಂದ ಒದ್ದೆ ಒದ್ದೆ.

ಈ ಎರಡೂ ಸಾಲಿಗೆ ಸೇರದ ಮತ್ತೊಬ್ಬ ಅಗ್ರೇಸರನಿದ್ದ. ಎಲ್ಲರೊಳಗೊಂದಾಗದೇ ಇದ್ದುಕೊಂಡು, ಸದ್ದೇ ಇಲ್ಲದೆ ಸುದ್ದಿ ಮಾಡಿದ್ದ. ದವಡೆ ಮುರಿದರೂ ಮೈದಾನಕ್ಕೆ ಇಳಿದು ಒಂಟಿ ಸಲಗದಂತೆ ಕಾದಾಡಿದ್ದ. ದಾಯಾದಿ ವೈರಿಯ ಎಲ್ಲಾ ಹತ್ತು ವಿಕೆಟ್ ಗಳನ್ನು ಕಿತ್ತು ಮೆರೆದ ಸ್ಪಿನ್ ಬೌಲಿಂಗ್ ನ ಸಾರ್ವಭೌಮ ಆತ. ತಮ್ಮ ದೊಡ್ಡ ಪಾದಗಳಷ್ಟೇ ದೊಡ್ಡ ಮನಸ್ಸು ಹೊಂದಿರೋ ಜಂಬೋ ಆತ. ಹಿಂದೂ ಮಹಾಸಾಗರದಷ್ಟೇ ಪ್ರಶಾಂತ.

ಆಲ್ ಮೋಸ್ಟ್ ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್ ಎಂದರೆ ಆ ಐವರೇ. ಸಚಿನ್, ಗಂಗೂಲಿ, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ. ಫ್ಯಾಬ್ 5 ಅಂತಾನೇ ಫೇಮಸ್. ಅವರಿದ್ದ ಕಾಲ ಭಾರತೀಯ ಕ್ರಿಕೆಟ್ ನ ಉತ್ತುಂಗದ ಕಾಲವೂ ಆಗಿತ್ತು. 2011ರ ವಿಶ್ವಕಪ್ ಗೆದ್ದ ಬಳಿಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದರು. ಭಾರತಕ್ಕೆ ಮರಳಿ ವಿಶ್ವಕಪ್ ತರುವುದು ಅವರ ಜೀವಮಾನದ ಕನಸಾಗಿತ್ತು. ಸಚಿನ್ ಬಿಳಿ ಪ್ಯಾಂಟು, ಷಟರ್ು ಕಳಚಿಡೋ ಮೂಲಕ ಫ್ಯಾಬ್ -5 ಯುಗಾಂತ್ಯ ಕಂಡಿತು. ಅದಾದ ಬಳಿಕ, ಟೀಂ ಇಂಡಿಯಾ ಒಂದೇ ಒಂದು ಜಾಗತಿಕ ಟೂನರ್ಿ ಗೆದ್ದಿಲ್ಲ ಎನ್ನುವುದು ಸತ್ಯ.

ಕಾಲ ಚಕ್ರ ಮತ್ತೆ ಮತ್ತೆ ಸುತ್ತು ಹಾಕುತ್ತಂತೆ. ಆದರೆ ಭಾರತೀಯ ಕ್ರಿಕೆಟ್ ನ ಪಾಲಿಗೆ ಕಾಲ ಚಕ್ರ ತುಂಬಾ ಬೇಗನೇ ಒಂದು ಸುತ್ತು ಹಾಕಿ ಬಂದಿದೆ. ಭಾರತೀಯ ಕ್ರಿಕೆಟ್ ನ ರಥ ಎಳೆದ ಐವರು ಮಹಾನ್ ಕ್ರಿಕೆಟಿಗರು ಮತ್ತೆ ಒಂದಾಗಿದ್ದಾರೆ. ಕುಂಬ್ಳೆ ಮತ್ತೊಮ್ಮೆ ಜಂಬೋ ಸವಾರಿಗೆ ಸಿದ್ದರಾಗಿ ಬಂದಿರುವುದರೊಂದಿಗೆ ಮತ್ತೆ ಫ್ಯಾಬ್ -5 ಯುಗ ಆರಂಭವಾಗತೊಡಗಿದೆ.

ಇವರು ಕ್ರಿಕೆಟ್ ಬಿಟ್ಟರೂ, ಕ್ರಿಕೆಟ್ ಇವರನ್ನು ಬಿಡೋದಿಲ್ಲ. ದೇವರು ಮತ್ತೆ ಕಾಣಸಿಗದೇ ಹೋಗಬಹುದು. ಆದರೆ ದೇವರನ್ನು ಪೂಜಿಸದೇ ಇರಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್ ಮೊದಲು ಸೆಳೆದುಕೊಂಡಿದ್ದೇ ರಾಹುಲ್ ದ್ರಾವಿಡ್ ರನ್ನು. ಭಾರತದ ಮಹಾಗೋಡೆ ಈಗ ಮರಿಹುಲಿಗಳನ್ನು ತಯಾರಿಸೋ ದ್ರೋಣಾಚಾರ್ಯರಾಗಿದ್ದಾರೆ. ಭಾರತೀಯ ಕ್ರಿಕೆಟ್ ನ ಭವಿಷ್ಯ ಈಗ ದ್ರಾವಿಡ್ ಕೈಯಲ್ಲಿ ಸುರಕ್ಷಿತವಾಗತೊಡಗಿದೆ. ಸಚಿನ್ ಬಿಟ್ಟ ಬಳಿಕ ಬಿಸಿಸಿಐ ನಲ್ಲೂ ಬಹಳಷ್ಟು ನೀರು ಹರಿದಿದೆ. ಹಳೇ ರಕ್ತವೆಲ್ಲಾ (ಕೆಟ್ಟದ್ದು ಇದ್ದಿರಲೂ ಬಹುದು) ಬೆಟ್ಟಿಂಗ್ ಪ್ರವಾಹಕ್ಕೆ ಕೊಚ್ಚಿ ಹೋಗಿ, ಹೊಸ ರಕ್ತ ಹರಿದು ಬಂದಿದೆ. ಇಂತಹ ಸಮಯದಲ್ಲೇ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಓಪನಸರ್್ ಭಾರತೀಯ ಕ್ರಿಕೆಟ್ ಗೆ ಹೊಸ ಓಪನಿಂಗ್ ಕೊಡಲು ಕೈ ಜೋಡಿಸಿಬಿಟ್ಟರು. ಸಚಿನ್, ಗಂಗೂಲಿ ಜೊತೆಗೆ ಲಕ್ಷ್ಮಣ್ ಕೂಡಾ ಭಾರತೀಯ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸೇರಿಕೊಂಡು, ಕ್ರಿಕೆಟ್ ಗೆ ಹೊಸ ದಿಕ್ಕು ನೀಡಲಾರಂಭಿಸಿದ್ದರು. ಜಂಬೋ ಮಾತ್ರ ಕನರ್ಾಟಕ ಕ್ರಿಕೆಟ್ ಆಡಳಿತ, ಬಿಸಿಸಿಐನ ತಾಂತ್ರಿಕ ಸಮಿತಿ ಆಮೇಲೆ ಐಸಿಸಿ ಕೆಲಸ ಅಂತ ಕೊಂಚ ದೂರವೇ ಇದ್ದರು.

ಈಗ ಜಂಬೋ ಕೂಡಾ ಮತ್ತೆ ಭಾರತೀಯ ಕ್ರಿಕೆಟ್ ನ ಭಾಗವಾಗಿದ್ದಾರೆ. ಇನ್ನೇನು ಧೋನಿ ನಿರ್ಗಮಿಸೋ ದಿನಗಳೂ ಆಸುಪಾಸಿನಲ್ಲೇ ಇವೆ. ಅಲ್ಲಿಗೆ ಸಚಿನ್ ನಂತರದ ಮೂರು ಪೀಳಿಗೆ ಕ್ರಿಕೆಟ್ ನ ತೆರೆ ಮರೆಗೆ ಸರಿಯಲಿದೆ. ಕೊಹ್ಲಿ ನೇತೃತ್ವದಲ್ಲಿ ಉದಯೋನ್ಮುಖ ಆಟಗಾರರೇ ಭಾರತೀಯರ ಆಸೆಗಳನ್ನು ಹೊತ್ತು ಸಾಗಬೇಕಿದೆ. ಹೆಚ್ಚು ಕಮ್ಮಿ ಮುಂದಿನ ವರ್ಷ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ಹೀಗಾದಲ್ಲಿ, ನೇಪಥ್ಯದಲ್ಲೇ ಜೊತೆಯಾಗೋ ಈ ಫ್ಯಾಬ್ -5 ಮತ್ತೆ ಹೊಸ ಭಾರತದ ನೇತೃತ್ವ ವಹಿಸಲಿದ್ದಾರೆ. ಭಾರತೀಯ ಕ್ರಿಕೆಟ್ ನ ಭವಿಷ್ಯ ಮತ್ತೆ ಫ್ಯಾಬ್ 5 ಹೆಗಲಿಗೇರಿರುವುದು ಅಭಿಮಾನಿಗಳ ಪಾಲಿಗಂತೂ ದೀಪಾವಳಿಯಾಗಿದೆ. ಇತ್ತ ಕ್ರಿಕೆಟ್ ಗೆ ಹೊಸ ದೇವರೂ ಹುಟ್ಟಿಕೊಂಡಿದ್ದಾರೆ. ಜಂಬೋ ಸವಾರಿ ಕೆರಿಬಿಯನ್ ನಿಂದ ಆರಂಭವಾಗಲಿದೆ.


Monday, June 20, 2011

ಬಂಜೆ ಹೃದಯಕ್ಕೆ ಮೊದಲ ಹನಿ ಬಿತ್ತು !

ಗೆಳತಿಯನ್ನು ಮೆಜೆಸ್ಟಿಕ್ ಗೆ ಬಿಡಲು ಹೊರಟಿದ್ದೆ. ಇನ್ನು ಮೇಕ್ರಿ ಸರ್ಕಲ್ ದಾಟಿರಲಿಲ್ಲ. ಅಷ್ಟರಲ್ಲಾಗಲೇ ಕೈಮೇಲೆ ಮೊದಲ ಹನಿ ಬಿತ್ತು. ಅರೆ ಮಳೆ ! ನನ್ನ ಮನಸ್ಸೀಗ ಸೂತ್ರ ಹರಿದ ಗಾಳಿಪಟ. ಅಷ್ಟೊಂದು ಸಂಭ್ರಮ. ರೋಮಾಂಚನ.

ಅದೆಷ್ಟು, ಖುಷಿಯಾಗಿತ್ತೆಂದ್ರೆ, ನನಗೆ ಆಮೇಲೆ ಬೇರೇನೂ ಬೇಕಿರಲಿಲ್ಲ. ಮನದನ್ನೆಯ ಸೆರಗು ಹಾಗೆಯೇ ಸೋಕಿ ಹೋದಂತಹ ತಂಗಾಳಿ, ಎವೆ ಇಕ್ಕೋ ಮುನ್ನವೇ ಮುತ್ತಿನಂಥ ಹನಿಗಳ ಅಭಿಷೇಕ. ವ್ಹಾವ್ ! ಒಣಗಿ ಕಾವಲಿಯಂತಾದ ಬಂಜರು ಭೂಮಿಗೆ ಮೊದಲ ಹನಿ ಬೀಳತ್ತಲ್ಲ, ಧಾರಿಣಿಯ ಆ ಖುಷಿ ನನ್ನಲ್ಲಿ.

ತಲೆ ಮೇಲೆ ಬಿದ್ದ ಹನಿಗಳು ನಿಧಾನಕ್ಕೆ ಜಾರಿ ಕಿವಿಯ ಓಣಿಯಿಂದ ಬಾಗಿ ಭುಜವನ್ನ ಹನಿಸಿ ಹೊಟ್ಟೆಯಾಳಕ್ಕೆ ಇಳಿಯುವಾಗ ಅದೇನು ರೋಮಾಂಚನ. ಮೈಮೇಲೆ ಮೊದಲ ಮಳೆ ಬಿದ್ದ ಸಂಭ್ರಮಪೂರ್ತಿ ಅನಾವರಣ. ಹೊಸಾ ಮಳೆ- ಹಸೀ ಮಳೆ. ಒಂದಿಡೀ ವರ್ಷದ ಸಮೃದ್ಧ ಘಮಕ್ಕೆ ಸಾಕು ಈ ಮಳೆ. ಗೆಳತಿ ಊರಿಗೆ ಹೊರಟಳು ಅನ್ನೋ ಬೇಜಾರಿನ ಕ್ಷಣಕ್ಕೆ ಈ ಮಳೆ ಜೊತೆಗಾತಿ.

ಹಾಗಂತ ಬೆಂಗಳೂರಿಗೆನು ಇದು ಮೊದಲ ಮಳೆಯಲ್ಲ. ಒಮ್ಮೆ ಆಫೀಸ್ ಸೇರಿಕೊಂಡರೆ, ಹೊರಗೆ ಏನು ನಡೆಯುತ್ತಿದೆ ಅನ್ನೋದೇ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಎ ಸಿ ರೂಮಿನಲ್ಲಿ ಬಂಧಿಗಳು ನಾವು !

ಅಂದ ಹಾಗೆ ಕರಾವಳಿಯ, ಆಚೆ ಪಟ್ಟಣವು ಅಲ್ಲದ ಈಚೆ ಹಳ್ಳಿಯು ಅಲ್ಲದ ಪುಟ್ಟ ಊರಿನಿಂದ ಬಂದ ನಮ್ಮಂಥ ಹುಡುಗರಿಗೆ, ಅಸಲಿ ಇದು ಮಳೆಯೇ ಅಲ್ಲ. ನಮ್ಮ ಕಡೆ ಹೇಳುವ ಪಿರಿಪಿರಿ ಮಳೆ (ತುಂತುರು ಮಳೆ]. ಸಿಲಿಕಾನ್ ಸಿಟಿಯ ದೊಡ್ಡ ಮಳೆ ಕೂಡ ನಮ್ಮ ಜನರಿಗೆ, ಏನೋ ಬಂದು ಹೋಯ್ತು ಅನ್ನುವಂಥ ಮಳೆ ಅಷ್ಟೇ. ಬೆಂಗಳುರಿನಂಥ ಕಾಂಕ್ರೀಟ್ ಕಾಡು ಸೇರಿಕೊಂಡ ನಮಗೆ ಈಗೀಗ ಇದೂ ದೊಡ್ಡ ಮಳೆಯೇ. ಅದಕ್ಕೆ ಅಷ್ಟೊಂದು ಸಂಭ್ರಮಿಸಿದ್ದು.

ಹಾಗೆ ನೋಡಿದರೆ ಬೆಂಗಳೂರಿನದ್ದು, ಹಸಿವಾದಾಗ ಅಳುವ ಪುಟ್ಟ ಕಂದನಂತ ಮಳೆ. ಅದರಲ್ಲೂ, ಪಕ್ಕದ ಮನೆಯ ಮಕ್ಕಳನ್ನು ಎತ್ತಿಕೊಂಡಾಗ ಸಿಟ್ಟು ಬರತ್ತಲ್ಲ ಅಂತ ಮಳೆ. ಧಡಕ್ ಅಂತ ಸುರಿಯತ್ತೆ, ಅಷ್ಟೇ ವೇಗದಲ್ಲಿ ನಿಂತು ಬಿಡತ್ತೆ. ಅದರಲ್ಲೂ ಸ್ಕೂಲು, ಆಫೀಸ್ ಬಿಡೋ ವೇಳೆಗೆ ಸುರಿದು ಮರಗಳನ್ನು ಕಡಿದು ಹಾಕಿದ ಕೋಪ ತೀರಿಸಿಕೊಳ್ಳತ್ತೆ.

ಕರಾವಳಿಯದ್ದೋ ಅಮ್ಮನ ಹಾರೈಕೆ, ಹೆಂಡತಿಯ ಪ್ರೀತಿಯಂತ ಮಳೆ. ದಿನಪೂರ್ತಿ, ವಾರಗಟ್ಟಲೆ ಒಂದೇ ಸಮನೆ ಸುರಿಯುತ್ತಿರುತ್ತದೆ. ದೂರದಿಂದಲೇ ವಾರ್ನಿಂಗ್ ಕೊಡೊ ಧೋ ಅನ್ನೋ ಸದ್ದು, ಏನೋ ಆಗಿಯೇ ಬಿಡ್ತು ಎಂಬಂತೆ ಧಾವಂತದಿಂದ ಓಡಾಡೋ ದುಂಬಿಗಳು, ಪಟಪಟನೆ ಉದುರೋ ಮಾವು, ತಂಗಾಳಿ ಜೊತೆಗೆ ಬರೋ ಪರಿಮಳ..... ಆಹಾ... ಜಗತ್ತಿನಲ್ಲಿ ಇದಕ್ಕಿಂತ ಸೌಂದರ್ಯ ಬೇರೆ ಇಲ್ಲವೇ ಇಲ್ಲವೇನೋ.

ಕರಾವಳಿ ಮಳೆ ನೆನಪಿಗೆ ಬಂತು ಅಂದ್ರೆ ಇಲ್ಲಿ ಇರೋದು ಉಂಟೆ. ಅರೆ, ನಾನಾಗಲೇ, ಕೂತಲ್ಲೇ ಊರಿಗೆ ತಲುಪಿ ಬಿಟ್ಟೆ. ಅದೇ ಅಲ್ವ ನಾವು ಹರಿದ ಚಡ್ಡಿ ಹಾಕ್ಕೊಂಡು ಭರಪೂರ ಮಳೆಯಲ್ಲಿ ನೆನೆಯುತ್ತ ಜಾರಿ ಬೀಳ್ತಿದ್ದ ಗುಡ್ಡ . ಹೌದು ಅದೇ. ನೋಡಿ ನನ್ನ ಕೈಯಲ್ಲಿ ಪೇಪರ್ ಬೇರೆ ಇದೆ.... ನಾನೀಗ ದೋಣಿ ಮಾಡಬೇಕು.... ಮಳೆಯ ಹನಿ ಹನಿ ನೆನಪುಗಳನ್ನು ಆಮೇಲೆ ಹೇಳ್ತೇನೆ...

Saturday, March 12, 2011

GUÁæt

¦æAiÉÄÃ

¤£Àß ªÀÄgÉAiÀįÁgÀzÀ

£É£À¥ÀÄUÀ½UÉ

£À£Àß

PÀtÄÚUÀ¼Éà GUÁæt

¥Àæ±Éß

ªÀ¸ÀAvÀ ¸ÀÄj¹zÀ

E§â¤

PÀgÀUÀĪÀ ªÀÄÄ£ÀߪÉÃ

VæÃµÀä ¸ÀÄj¸À¨ÉÃPÉÃ

PÀA§¤ ?

ªÀÄÆqÀt

¥ÁævÀ

PÁ®zÀ°è

¸ÀÆAiÀÄð

ºÀÄlÄÖªÀ

ºÉjUÉ ªÀÄ£É

¦æÃvÀÄ PɪÀiÁä¬Ä

Tuesday, December 28, 2010

ಮತ್ತೆಂದೂ ಈ ವರ್ಷ ಬಾರದೆ ಇರಲಿ

ಹೌದು ಈ ಮಾತು ಹೇಳಲು ಕಾರಣವಿದೆ. ರಾಜ್ಯದ ಪಾಲಿಗೆ ಈ ವರ್ಷವಂತೂ ದುಸ್ವಪ್ನ ! ಪಾಲಿಟಿಕ್ಸ್ ನ ಗಲೀಜ್ ಟ್ರಿಕ್ಸ್ ಗೆ ಇಡೀ ರಾಜ್ಯವೇ ಬಲಿಯಾಗಿದೆ. ಅಭಿವೃದ್ದಿ ಅನ್ನೋದು ಕನಸಿನ ಗಂಟಾಗಿ ಉಳಿದಿದೆ.

ಅದ್ ಹ್ಯಾಗೋ, ಸರ್ಕಾರ ತೆವಳುತ್ತಾ ಕುಂಟುತ್ತ ಸಾಗಿತ್ತು. ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆದಿತ್ತು. ಹೊಸ ಸಫಾರಿ ಹೊಲಿಸಿಕೊಂಡ ಸಿಎಂ, ಗುಲ್ಬರ್ಗಕ್ಕೆ ಹೋಗಿದ್ರೆ, ಇಲ್ಲಿ ಮತ್ತೊಂದಿಷ್ಟು ಸಚಿವರು ಶಾಸಕರು ಚೆನ್ನೈ ಗೆ ಹಾರಿ ಹೋಗಿದ್ರು. ಸರ್ಕಾರ ಅಪಾಯಕ್ಕೆ ಸಿಲುಕಿತು.

ಆಮೇಲೆ ನಡೆಯಿತು ನೋಡಿ ಮಾಟ, ಮಂತ್ರ, ತಂತ್ರದ ಅನಾಚಾರ ! ಇಡೀ ರಾಜ್ಯಕ್ಕೆ ಇದಕ್ಕಿಂತ ದೊಡ್ಡ ಕಂಟಕ ಏನಿದೆ ಹೇಳಿ ? ಜನ ಛೀ ಥೂ ಅಂತ ಉಗಿದು ಉಪ್ಪಿನಕಾಯಿ ಹಾಕಿದರು ನಮ್ಮನ್ನಾಳುವ ಜನರಿಗೆ ಬುದ್ದಿ ಬರಲಿಲ್ಲ. ತಮಿಳುನಾಡು ಕೇರಳ ಅಂತ ಸುತ್ತಾಡಿದ್ದೆ ಸುತ್ತಾಡಿದ್ದು. ತಮ್ಮದೇ ಶಾಸಕರನ್ನು ನಂಬದ ಸಿಎಂಗೆ, ಅದ್ಯಾವುದೋ ದೇವರ ಮೇಲೆ, ಮಾಂತ್ರಿಕರ ಮೇಲೆ ನಂಬಿಕೆ ! ಜನರ ಆಶೀರ್ವಾದದಿಂದ ಗೆದ್ದ ಸಿಎಂ ಗೆ ಜನರ ಮೇಲು ವಿಶ್ವಾಸವಿರಲಿಲ್ಲ. ಇದ್ದಿದ್ರೆ, ಅವರು ಯಾವತ್ತೂ ರಾಜ್ಯವನ್ನು ಈ ಸ್ಥಿತಿಗೆ ತರುತ್ತಿರಲಿಲ್ಲ.

ಸಿಎಂ ವಿಚಾರ ಅತ್ತ ಕಡೆ ಇರಲಿ. ಪ್ರಜ್ಞಾವಂತ ರಾಜ್ಯದ ಮತ್ತೊಂದು ಕತೆ ಕೇಳಿ.

ಅದೊಂದು ಫೈನ್ ಡೇ . ನಾವೆಲ್ಲ ಗೌರವದಿಂದ ಕಾಣುವ ವಿಧಾನ ಸೌಧದ ಗೇಟುಗಳಲ್ಲೇ ಬಿದ್ದಿತ್ತು ನೋಡಿ ಹಳದಿ, ನಿಂಬೆ, ಗೊಂಬೆ, ಕುಂಕುಮ ! ಅದನ್ನು ನೋಡಿದ ಎಂಥವರಿಗೂ ಬೇರೆ ಯೋಚನೆಯೇ ಇಲ್ಲದೆ ಗೊತ್ತಾಗಿತ್ತು. ಅಲ್ಲಿ ವಾಮಾಚಾರ ನಡೆದಿತ್ತು. ವಿಧಾನಸೌಧಕ್ಕೆ ವಾಮಾಚಾರ !

ಬಹುಶ ರಾಜ್ಯದ ಜನತೆ ಕನಸಲ್ಲೂ ಇಂತಹ ಘಟನೆ ನೋಡಿರಲಿಕ್ಕಿಲ್ಲ. ಈಗಿನ ರಾಜಕಾರಣಿಗಳು ರಾಜ್ಯದ ಜನತೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದರೆ. ತಾವು ಅಧಿಕಾರಕ್ಕಾಗಿ ಏನೂ ಮಾಡಲು ಸಿದ್ಧ ಅಂತ ಘೋಷಿಸಿದ್ದಾರೆ. ೨೦೧೦ರ ಉದ್ದಕ್ಕೂ ಇಂತಹ ಘಟನೆಗಳು ನಡೆದೇ ಇವೆ. ಸೀನಿಯರ್ಸೆ ಮಾಡಿದ್ಮೇಲೆ ತಮಗೇನು ಅಂತ ಪಂಚಾಯತ್ ಚುನಾವಣೆಯಲ್ಲೂ ಮಾಟ ಮಂತ್ರದ ಪ್ರಯೋಗವಾಗಿದೆ.

ರಾಜಕಾರಣಿಗಳೇ ದಯವಿಟ್ಟು ಮನ ಮರ್ಯಾದೆಯಿಂದ ನಡೆದುಕೊಳ್ಳಿ. ಒಂದು ಕಾಲಕ್ಕೆ ಸ್ವಚ್ಚ ರಾಜಕಾರಣಕ್ಕೆ ಹೆಸರಾದ ನಾಡು ನಮ್ಮದು. ಮತ್ತೆಂದು ಹೀಗೆ ಮಾಡಬೇಡಿ. ರಾಜಕೀಯದ ಮಟ್ಟಿಗೆ, ಕನ್ನಡಿಗರು ೨೦೧೦ನ್ನು ಮರೆತುಬಿಡುತ್ತಾರೆ. ಇಂತಹ ವರ್ಷವನ್ನು ಮತ್ತೆ ತರಬೇಡಿ, ಪ್ಲೀಸ್ .

Saturday, July 31, 2010

ಮೌನಗಳ ಮಾತು

ಅವಳು, ಅಂದರೆ ಅವಳು. ವಯಸ್ಸು ೧೬ ಇರಬಹುದಷ್ಟೇ. ಅವಳು ನನ್ನ ಸ್ಪೂರ್ತಿ. ನನ್ನ ಜೀವನ, ನನ್ನ ಸರ್ವಸ್ವ. ಅವಳ ಹೆಸ್ರು ? ಗೊತ್ತಿಲ್ಲ. ಅವಳು ಯಾರು ಗೊತ್ತಿಲ್ಲ. ಅದಕ್ಕೆ ಅವಳು ಅವಳೇ. ಅವಳು ನಕ್ಕರೆ ಮಿಂಚಿನ ಕಾಂತಿ. ಬಿರಿದ ಸೂರ್ಯನಂತೆ ಅವಳ ಕಣ್ಣುಗಳು. ಆದ್ರೂ ಕೆಲವೊಮ್ಮೆ ತಂಪು ಚಂದಿರನಂತೆ. ಮೋಡದಿಂದ ಉದುರುವ ಹನಿಗಳಂತೆ ಅವಳ ನಡೆ. ಅವಳ ಕಾಲ್ಗೆಜ್ಜೆ ಕಿಣಿಕಿಣಿಗೆ ಬಸ್ಸೂ ಮೌನ.

ಹೌದು, ಆಕೆ ನನಗೆ ದಿನಾ ಬಸ್ಸಿನಲ್ಲಿ ಸಿಗುತ್ತಿದ್ದಳು. ಆಗ ಪಿಯುಸಿ. ಮನಸ್ಸು ಹುಚ್ಚು ಕುದುರೆ. ಕ್ಷಣದಲ್ಲಿ ಎಲ್ಲೆಂದರಲ್ಲಿ ಅಡ್ಡಾಡಿ ಬರುವಂತಹದ್ದು. ಕನಸುಗಳು ಆವಿರ್ಭವಿಸುವ ಕಾಲ. ಅವಳ ಮೊಗ ಕಂಡಾಗ ಮಾತು ಮೌನ. ಮನಸ್ಸು ಸ್ತಬ್ಧ. ಭಾವನೆಗಳು ಮಲಗುತ್ತವೆ. ಯೋಚನೆಗಳು ಹುಟ್ಟುತ್ತವೆ. ಪದಗಳು ಗೀಚಲ್ಪಡುತ್ತವೆ. ಅವುಗಳಿಗೆ ಕತೆ. ಕವನ, ಚುಟುಕುಗಳೆಂದು ನಾನಾ ಹೆಸರನ್ನು ಇಟ್ಟು ಸಾಹಿತಿಯಾಗಲು ಪ್ರಯತ್ನಿಸುತ್ತೇನೆ. ಸಂಭಾವಿತನೆನಿಸಿಕೊಳ್ಳುವ ಬಯಕೆ. ಬರವಣಿಗೆ ಒಂದು ಹುಚ್ಚು. ನನ್ನ ಹುಚ್ಚಿಗೆ ಅವಳೇ ಸ್ಪೂರ್ತಿ.

ನಮ್ಮ ನಡುವಿನ ಸಂಬಂಧ ಕೊಂಡಿ ಕೆಂಪು ಬಸ್ಸು. ಪ್ರತಿದಿನ ಅವಳನ್ನು ನೋಡುತ್ತಿದ್ದೆ. ಮಾತನಾಡಲೆಂದು ಬಾಯಿ ತೆರೆಯುತ್ತಿದ್ದೆ. ಆಗುತ್ತಿರಲಿಲ್ಲ. ದಿನವೂ ಹೀಗೆಯೇ ನಡೆಯುತ್ತಿತ್ತು. ಅವಳ ಸೌಂದರ್ಯವನ್ನು ಬಣ್ಣಿಸುವುದಷ್ಟೇ ನನ್ನ ಲೇಖನಿಗೆ ಕೆಲಸವಾಗಿತ್ತು. ಮೌನ ಸದಾ ಮೌನ. ಇಷ್ಟಾದ್ರೂ, ಅವಳ ಒಲವೆಂಬ ಮೌನ ಸಂಜೀವಿನಿ ನನ್ನ ಹಾಡಿಗೆ ಜೀವ ತುಂಬುತ್ತಿತ್ತು. ನಾನೆಲ್ಲೋ ಹಾಡುತ್ತಿದ್ದೆ. ಅವಳೆತ್ತಲೋ ನೋಡುತ್ತಿರುತ್ತಾಳೆ. ಬಸ್ಸು ಓಡುತ್ತಲೇ ಇರುತ್ತದೆ. ಇಳಿಯುವಲ್ಲಿ ಇಳಿಯುತ್ತಾಳೆ. ನನಗೆ ಮತ್ತಷ್ಟು ದೂರ ಅದೇ ಬಂಡಿಯ ಪಯಣ. ಛೇ ಅವಳು ನನ್ನ ಮನೆಯ ಪಕ್ಕದಲ್ಲೆ ಇರಬಾರದಿತ್ತೇ ? ಮನ ಕಾತರಿಸುತ್ತದೆ.

ದಿನಗಳು ಉರುಳಿದವು. ಈಗ ಅವಳಿಗೆ ಬೆರೆ ಬಸ್ಸು. ನಾನು ಮತ್ತೆ ಮತ್ತೆ ಅವಳು ಕುಳಿತುಕೊಳ್ಳುತ್ತಿದ್ದ ಅದೇ ಸೀಟನ್ನು ನೋಡಿ ಕನವರಿಸುತ್ತೇನೆ. ಈಗ ಮಾತುಗಳಿಗೆ ಜೀವವಿದೆ. ಸ್ಪೂರ್ತಿ ಇಲ್ಲ. ಮನಸ್ಸಿನ ಅಲೆದಾಟಗಳು ಅಲ್ಲಲ್ಲೇ ಅಡಗಿ ಕುಳಿತಿವೆ. ಮನಸ್ಸು ಸುಮ್ಮನೇ ಕೊರಗುತ್ತಿದ್ದರೂ ಅದಕ್ಕೆ ಸಾವಿರ ಕನಸುಗಳಿವೆ. ಮಾತಿಲ್ಲದೆ ಮನಸ್ಸು ವಿಭ್ರಾಂತವಾಗಿದೆ. ಅಳಲಾರದೆ ನಗುತ್ತೇನೆ..ನಗಲಾರದೆ ಅಳುತ್ತೇನೆ. ಏಳಲಾರದೆ ಬೀಳುತ್ತೇನೆ. ಪುಸ್ತಕಗಳು, ಹಾಳೆಗಳು, ಪೆನ್ನು ಕಲ್ಪನೆಗೆ ಬಣ್ಣ ಹಚ್ಚುತ್ತಿದ್ದ ವಸ್ತುಗಳೆಲ್ಲಾ ಸ್ಟ್ರೈಕ್ ಮಾಡ್ತಿವೆ. ಸೋ, ನೆನಪುಗಳಾ ಚಿತ್ರ ಬಿಚ್ಚಿ, ಕಣ್ಣೆದುರಿಗಿಟ್ಟುಕೊಂಡು ಹಾಗೇ ದಿಂಬಿಗೊರಗುತ್ತೇನೆ. ಕಂಬನಿ ಹನಿಕಿಸಿ ಒದ್ದೆ ಮಾಡುತ್ತೇನೆ. ಸುಂದರ ನೆನಪುಗಳ ಲೋಕದಲ್ಲಿ ಚಿನ್ನದ ಉಯ್ಯಾಲೆ ಕಟ್ಟುತ್ತೇನೆ. ತೂಗುತ್ತೇನೆ. ನಿದ್ದೆ ಹತ್ತುವುದಿಲ್ಲ. ಕನಸುಗಳಿಗೆ ಜೀವ ತುಂಬಲು ಹೆಣಗುತ್ತೇನೆ. ಈ ಹೆಣಗಾಟದಲ್ಲಿ ನಿದ್ದೆ ಬಂದದ್ದೇ ತಿಳಿಯುವುದಿಲ್ಲ. ಮೌನಗಳು ಹೊದಿಕೆಯಾಗುತ್ತವೆ..... ಮಾತುಗಳು ಹಾಸಿಗೆಯಾಗುತ್ತವೆ.

ಪ್ರಶ್ನೆ ಕಾಡುತ್ತದೆ. ಯಾಕೆ ಹೀಗೆ ? ನಾನೇನೂ ಭಗ್ನ ಪ್ರೇಮಿ ಅಲ್ಲ. ಅಥವಾ ಅವಳನ್ನು ಪ್ರೀತಿಸಿ, ವಿಫಲವಾದವನೂ ಅಲ್ಲ. ಅಸಲಿ ಅವಳನ್ನು ಆ ದೃಷ್ಟಿಯಿಂದ ನೋಡಿದವನೂ ಅಲ್ಲ. ಅವಳನ್ನು ಕೇವಲ ಸ್ಪೂರ್ತಿಯಾಗಿ ಕಂಡೆ. ಅವಳಿಲ್ಲದೆ ಏನೂ ಇಲ್ಲ. ಬರೆಯಲು ಬೆರಳುಗಳು ಓಡುತ್ತಿಲ್ಲ. ಬರವಣಿಗೆ ಇಲ್ಲದೆ ಜೀವನವಿಲ್ಲ. ಬದುಕಬೇಕು. ಏನೋ ಬರೆಯಲು ಹೋಗುತ್ತೇನೆ.... ಅದು ಮತ್ತಿನ್ನೇನೋ ಆಗುತ್ತದೆ. ಕಳೆದ ದಿನಗಳ ಆಕೆಯ ನೆಪದಲ್ಲೇ ಪದಗಳ ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಸೃಷ್ಟಿಕರ್ತನೆನಿಸಿಕೊಳ್ಳಲು. ಆದರೂ ಅವಳ ನೆನಪು ಕಾಡುತ್ತಲೇ ಇರುತ್ತದೆ.

ಬಹುಷ: ನೆನಪುಗಳು ಹೊಚ್ಚ ಹೊಸದಾಗಿ ಕಾಡಾಲು ಅವಳ ಮೌನವೇ ಕಾರಣವಿರಬಹುದು. ಅವಳ ಜೊತೆ ಮಾತನಾಡಿದ್ದಿದ್ದರೆ, ತಪ್ಪುಗಳು ನಡೆದು, ನಮ್ಮ ಸಂಬಂಧ ಹಳಸಬಹುದಿತ್ತು. ಈಗ ಆ ನೋವಿಲ್ಲ. ನಮ್ಮ ನಡುವೆ ಉಲಿದು ಹೋದ ಮೌನ ನಮ್ಮ ಸಂಬಂಧವನ್ನು ನಿತ್ಯ ನೂತನಗೊಳಿಸುತ್ತಿದೆ. ಮೌನಗಳ ಮಾತು ಎಷ್ಟು ಮಧುರ ? ಆ ನೆನಪು ಎಷ್ಟೊಂದು ಸಿಹಿ. ಆ ಮೌನ ಮತ್ತಷ್ಟು ದಿನ ಉಳಿಯಲಿ. ಆ ಹುಡುಗಿ ಮತ್ತೆ ನನ್ನ ಮುಂದೆ ಮೌನವಾಗಿ ನಲಿದಾಡಬೇಕು. ಸ್ಪೂರ್ತಿ ನೀಡಬೇಕು. ಇಂತಹ ಆಸೆಗಳಿಗೇನೂ ಕಮ್ಮಿ ಇಲ್ಲ. ಮೌನಗಳ ಆ ಮಧುರ ನೆನಪುಗಳೇ ಹಾಗೆ, ಬೇಕಾದಾಗ್, ಬೇಡವಾದಾಗಲೆಲ್ಲಾ ಧುತ್ತೆಂದು ಕಾಡಿ ಮರೆಯಾಗುತ್ತವೆ. ಉಳಿಯೋದು ಕನವರಿಕೆ ಮಾತ್ರ. ಆ ಕನವರಿಕೆಯಲ್ಲೇ ಪುಟ್ಟದೊಂದು ಸ್ವರ್ಗ ಸೃಷ್ಟಿಯಾಗುತ್ತದೆ. ಅಲ್ಲಿ ಎಲ್ಲವೂ ನಾನೇ. " ಆವ ರೂಪದೊಳು ಬಂದರೂ ಸರಿಯೇ, ಆವ ವೇಷದೊಳು ನಿಂದರೂ ಸರಿಯೇ.... ಹೊಸ ಬಾಳಿನ, ಹೊಸ ಗಾಳಿಯ, ಹೊಸ ಸ್ಪೂರ್ತಿಯ ತಾ ಹುಡುಗಿ ಅಂತ ಗರ್ಭದ ಕೂಸು ಪಿಸುಗುಡುತ್ತದೆ. ಆಕೆ ಎಲ್ಲಿ ? ವರ್ಷಗಳು ಉರುಳಿದ್ರೂ ನನ್ನ ಕಣ್ಣು ಹುಡುಕ್ತಾನೇ ಇವೆ...

Monday, December 8, 2008

ಏನೋ ಹೇಳಬಹುದಿತ್ತು

ನಾನು ನಿನಗೆ ಏನೋ ಹೇಳಬಹುದಿತ್ತು
ನೀನೂ ನನಗೆ ಏನೋ ಹೇಳಬಹುದಿತ್ತು
ಏನೂ ಹೇಳದೆಯೇ ಕಳೆದು ಹೋಯಿತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

ಆ ದಾರಿಯ ತುಂಬಾ ಮುಳ್ಳುಗಳಿದ್ದವು
ನೀನು ಜತೆಗಿದ್ದಾಗ ಗೊತ್ತೇ ಇರಲಿಲ್ಲ
ಸವೆಸಿ, ಸವೆಸಿ ಒಂಟಿಯಾದ ಪಯಣಿಗನಿಗೆ
ಏನೋ ಹೇಳಬಹುದಿತ್ತು.

ನೀನು ನಡೆದ ನೆಲ ಮಿದುವಾಗಿದೆ. ಅದು
ನನ್ನೆದೆ ಎಂದು ತಿಳಿದದ್ದು ನೀನು ತೀರ
ತಲುಪಿದ ಮೇಲೆಯೇ, ನಿನಗೆ
ಏನೋ ಹೇಳಬಹುದಿತ್ತು.

ಸಂಜೆಗಳನ್ನೆಲ್ಲಾ ಸುಮ್ಮನೆ ಪುಡಿಗಟ್ಟಿದೆವು
ನೀನು ಮೌನವಾಗಿ, ನಾನು ಕಿವುಡನಾಗಿ
ಕೂತು ಕೂತು ಹಾಗೇ ಎದ್ದು ಹೋಗಿದ್ದೆವು
ಏನೋ ಹೇಳಬಹುದಿತ್ತು.

ಬದುಕಿನಲ್ಲಿ ಕನಸುಗಳನ್ನು ತೇಲಿಬಿಟ್ಟೆವು
ಶೂನ್ಯವೇ ಮಿತಿಯೆಂಬಂತೆ
ಕೊನೆಗೆ ಉಳಿದದ್ದು ಅದು ಮಾತ್ರ- ಬೆಚ್ಚಗಾಗಿ
ಇಬ್ಬರಿಗೂ ಏನೋ ಹೇಳಬಹುದಿತ್ತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

Sunday, December 7, 2008

ಹಕ್ಕಿ ಮತ್ತು ಪ್ರಶ್ನೆ

ಪರಿಸ್ಥಿತಿ
ಅಷ್ಟೊಂದು ಅಸಹನೀಯವಾಗದೇ
ಇರುತ್ತಿದ್ದರೆ ಆ ಹಕ್ಕಿಗೆ
ರೆಕ್ಕೆಪುಕ್ಕಗಳು ಹುಟ್ಟುತ್ತಿರಲಿಲ್ಲ
ನಭದಿ ಹಾರುತ್ತಿರಲೂ ಇರಲಿಲ್ಲ
ಈಗಲೂ ಅಷ್ಟೆ..
ತೀರಾ ಸಹನೀಯವಾಗೇನೂ ಇಲ್ಲ .
ರೆಕ್ಕೆಯಲ್ಲಿ ರಂಧ್ರಗಳು
ಕಾಣುವುದೆಷ್ಟೋ, ಕಾಣದ್ದೆಷ್ಟೋ
ದರಿದ್ರ, ಬರ, ಬಡತನ, ಕೊನೆಯಿಲ್ಲದ್ದು.
ಭ್ರಷ್ಟ, ಹೊಟ್ಟೆಬಾಕತನ ಮುಗಿಯದ್ದು.
ರೆಕ್ಕೆಯಂತೂ ಛಿದ್ರಛಿದ್ರ
ನೆತ್ತರ ಕಾರುವ ಆಕ್ರಂದನ,
ಮೇಧಾವಿಯ ಕಿವಿಗೆ ದೂರ
ಹಕ್ಕಿ ಅರಚುತ್ತಲೇ ಇದೆ.
ಚಪ್ಪಾಳೆ ಮೊಳಗುತ್ತಲೇ ಇದೆ.
ಹಕ್ಕಿಯ ಅಳಿವು-ಉಳಿವು ?

ಉಳಿದದ್ದು ಅದೊಂದೇ ಪ್ರಶ್ನೆ.

Friday, November 7, 2008

ಆಕೆಗೆ ಡಿಕ್ಕಿ ಹೊಡೆದಿದ್ದೆ !

ತುಂಬಾ ದಿನ ಆಯ್ತು ನಿಮ್ಮ ಜೊತೆ ಮಾತನಾಡಿ. ಕೆಲಸದ ಒತ್ತಡಗಳು, ಹಬ್ಬದ ಗೌಜಿ ಎಲ್ಲಾ ಮುಗಿದು ಒಂದಿಷ್ಟು ನಿರುಮ್ಮಳನಾಗಿದ್ದೇನೆ. ಹಾಗಾಗಿ ಈಗ ಮತ್ತೆ ಅಂಗಳಕ್ಕೆ ಬಂದಿದ್ದೇನೆ. ನಾನು ಈಗ ಹೇಳ ಹೊರಟಿರುವುದು ಮತ್ತದೇ ಬಾಲ್ಯದ ಬಗ್ಗೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಾನು ಬಾಲ್ಯವನ್ನು ಅದೆಷ್ಟು ಆಸ್ವಾದಿಸಿದ್ದೇನೋ, ಅಷ್ಟೇ ಬೇಗ ಬಾಲ್ಯವನ್ನು ಕಳೆದುಕೊಂಡಿದ್ದೇನೆ. ಆಗ ಹಾಕಲು ಇದ್ದದ್ದು ಮೂರೇ ಮೂರು ಚೆಡ್ಡಿ, ನಾಲ್ಕು ಅಂಗಿ. ಬ್ರಾಹ್ಮಣರಾದ ನಮಗೆ ಸರಕಾರದಿಂದ ಸಮವಸ್ತ್ರವೂ ಲಭಿಸುತ್ತಿರಲಿಲ್ಲ. ವಷ೯ಕ್ಕೊಂದು ಹೊಸ ಜೊತೆ ಧಿರಿಸು ತೆಗೆದುಕೊಂಡರೆ, ಹಳೆಯ ಒಂದು ಜೊತೆಗೆ ವಿಆರ್‍ ಎಸ್‌ ಕೊಡ್ತಾ ಇದ್ದೆ. ಆದರೆ, ನನ್ನ ಬಾಲ್ಯದ ಅವಾಂತರಗಳಿಗೆ ಏನೂ ಬರವಿರಲಿಲ್ಲ.

ನಂಗೆ ನಿದ್ದೆ ಮಾಡೋದು ಅಂದ್ರೆ ತುಂಬಾ ಆಸಕ್ತಿ. ಇದರಲ್ಲೇನೂ ವಿಶೇಷ ಇಲ್ಲ ಅಂದ್ಕೋಬೇಡಿ. ಯಾಕಂದ್ರೆ ಅದು ನಂಗೆ ಬರೇ ಆಸಕ್ತಿಯ ವಿಚಾರವಷ್ಟೇ ಆಗಿರಲಿಲ್ಲ, ಒಂದು ರೀತಿಯಲ್ಲಿ ನನಗೆ ನಿದ್ದೆ ಮಾಡೋದು ಚಾಳಿ ! ಪ್ರೈಮರಿಯಲ್ಲಿದ್ದಾಗ ನಿದ್ದೆಯಿಂದಾದ ಅವಾಂತರಗಳ ಬಗ್ಗೆ ಅಷ್ಟೊಂದು ನೆನಪಿಲ್ಲ. ಆದ್ರೆ, ಅದಕ್ಕೊಂದು ವಿಶ್ವವ್ಯಾಪಿ ಮಾನ್ಯತೆ ಸಿಕ್ಕಿದ್ದು ಡಿಗ್ರಿ ಕಾಲೇಜಿಗೆ ಸೇರಿದ ಮೇಲೆಯೇ ! ನನ್ನಿಂದ ಪ್ರಭಾವಿತರಾದವರು, ನನ್ನ ಆಟೋಗ್ರಾಫ್ ತುಂಬಾ ನನ್ನ ನಿದ್ದೆಯ ವಿವಿಧ ಭಂಗಿಗಳ ಚಿತ್ರಗಳನ್ನು ಬಿಡಿಸಿಟ್ಟಿದ್ದಾರೆ. ಅದಕ್ಕೆ ವಿವಿಧ ಹೆಸರುಗಳನ್ನೂ ಇಟ್ಟಿದ್ದಾರೆ. ಅಧ೯ಕಟಿ ನಿದ್ರಾಸನ, ಪದ್ಮ ನಿದ್ರಾಸನ, ಬೆಂಚಾಸನ, ಹೀಗೆ ಯೋಗಾಸನದ ವಿವಿಧ ಭಂಗಿಗಳನ್ನು ನಾನು ನಿದ್ದೆ ಹೊಡೆಯುವ ವಿವಿಧ ಭಂಗಿಗಳ ಜೊತೆ ಸಮೀಕರಿಸಿದ್ದಾರೆ.
ಒಂದಿನ ರಾತ್ರಿ ೭ ಗಂಟೆಗೆ ಹಾಸ್ಟೆಲ್‌ನಲ್ಲಿ ಚೇರ್‌ ಮೇಲೆ ಕುಳಿತುಕೊಂಡು ನಿದ್ದೆ ಮಾಡುತ್ತಿದೆ. ನಮ್ಮ ಹಾಸ್ಟೆಲ್ ಮೇಟ್ ಗಳು ನನ್ನ ಟೇಬಲ್ ಮೇಲೆ ಕಸದ ಬುಟ್ಗಿ, ಊಟದ ತಟ್ಟೆ , ಹಾಸಿಗೆ ಎಲ್ಲಾ ಎತ್ತಿಟ್ಟಿದ್ದರು. ವಾಡ೯ನ್‌ ಬರುವವರೆಗೆ ನಂಗೆ ಎಚ್ಚರವೇ ಇರಲಿಲ್ಲ. ಆಮೇಲೆ ಕಂಟಿನ್ಯೂಸ್ ಆಗಿ ೧೫ ದಿನ ಡೈರಿಯಿಂದ ಸೆಗಣಿ ಎತ್ತಿದ್ದೆ, ಪನಿಷ್‌ಮೆಂಟ್ !

ಅದಾಗಿ ಒಂದು ವಾರ ಕಳೆದಿರಲಿಲ್ಲ. ಸ್ಟಡಿ ಹವರ್‌ನಲ್ಲೇ ಮಲಗಿದ್ದೆ. ಮತ್ತದೇ ಗೆಳೆಯರು ನನ್ನ ಮೇಲೆ ಬಿಳಿ ಪಂಚೆ ಹೊದೆಸಿದರು. ಮತ್ಯಾರೋ ಊದುಬತ್ತಿ ಉರಿಸಿದರು. ಸಣ್ಣ ಶಲ್ಯವನ್ನು ಮಡಚಿ ನನ್ನ ಕತ್ತಿಗೆ ಹಾಕಿದರು. ಪಕ್ಕದಲ್ಲಿ ಕುಳಿತು ಅತ್ತರು. ಸಾಲದ್ದಕ್ಕೆ ಫೋಟೋ ಹೊಡೆದರು. ಇದನ್ನೆಲ್ಲಾ ಕಿಟಕಿ ಮೂಲಕ ವಾಡ೯ನ್ ನೋಡುತ್ತಿದ್ದದ್ದನ್ನು ಯಾರೂ ಗಮನಿಸಿರಲಿಲ್ಲ. ವಾಡ೯ನ್ನೂ ಕೇಳಲಿಲ್ಲ. ಆದರೆ, ಬೆಳಿಗ್ಗೆ ಬಂದವರೇ, ಗೆಸ್ಟ್ ಬಂದಿದ್ದಾರೆ ಎಂದು ಹೇಳಿ ಕ್ಯಾಮೆರಾ ತೆಗೆದುಕೊಂಡು ಹೋದರು. ಪ್ರಿನ್ಸಿಪಾಲ್ ಫೋನ್ ಮಾಡಿ ಕರೆಸಿಕೊಂಡಾಗಲೇ ನಮಗೆ ಜ್ಞಾನೋದಯವಾದದ್ದು.

ಅದು ಡಿಗ್ರಿಯ ಕೊನೆಯ ವಷ೯. ಪರೀಕ್ಷೆಗಳೆಲ್ಲಾ ಮುಗಿದಿತ್ತು. ಕಾಲೇಜಿನ ವಾಷಿ೯ಕ ಸಂಚಿಕೆ ಪೂತಿ೯ ಗೊಳಿಸಲು ನಾವಿನ್ನೂ ಹಾಸ್ಟೆಲ್‌ನಲ್ಲೇ ಇದ್ದೆವು. ಮತ್ತದೇ, ನಿದ್ದೆಯ ಮಂಪರಿನಲ್ಲಿ, ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದೆ. ಹಾಗೆ ನಡೆಯುತ್ತಿದ್ದಾಗಲೇ ಭಿಕ್ಷುಕಿಯೊಬ್ಬಳಿಗೆ ಡಿಕ್ಕಿ ಹೊಡೆದುಬಿಟ್ಟೆ. ತಗೊಳ್ಲಿ, ಜೀವನ ಪೂತಿ೯ ಖಚಿ೯ಗಾಗುವಷ್ಟು ಬೈಗುಳಗಳನ್ನು ಆಕೆ ದಾನವಾಗಿ ನೀಡಿದ್ದಳು. ಸತತ ೧೩ ದಿನವೂ ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಆಕೆಯಿಂದ ಉಗಿಸಿಕೊಳ್ಳುವ ಭಾಗ್ಯ ನನ್ನದಾಗಿತ್ತು ! ಅದೇ ಕೊನೆ, ಆಮೇಲೆ ಯಾವತ್ತೂ ಅತಿರೇಕವಾಗಿ ನಿದ್ದೆ ಮಾಡಿಲ್ಲ. ಪತ್ರಿಕೋದ್ಯಮ ಕ್ಷೇತ್ರದಲ್ಲಿರೋದ್ರಿಂದ ಅದಕ್ಕೆ ಅವಕಾಶವೂ ಕಡಿಮೆಯೇ. ನನ್ನ ನಿದ್ರಾಸನಗಳ ಬಗ್ಗೆ ದೊಡ್ಡ ಪುಸ್ತಕ (?) ಬರೆದು, ಲೋಕಾಪ೯ಣೆ ಮಾಡಬೇಕೆಂದಿದ್ದೇನೆ. ನನ್ನ ಹಾಗೆ ನಿಮಗೂ ನಿದ್ದೆಯಿಂದ ಪ್ರಯೋಜನಗಳಾಗಿದ್ದರೆ, ಬರೆದು ತಿಳಿಸಿ.

Wednesday, October 1, 2008

ಅಲ್ಲಿ ಇನ್ನೂ ದೆವ್ವ ಇದೆ !


ಅಲ್ಲಿ ಇನ್ನೂ ದೆವ್ವ ಇದೆ ! ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾವು ಚಿಕ್ಕವರಿದ್ದಾಗ ಅದನ್ನು ಸಂಪೂರ್ಣ ನಂಬಿದ್ದೆವು... ಹೆದರಿಕೊಂಡಿದ್ದೆವು. ಅಂತಹದ್ದೊಂದು ಜಾಗ ಇದ್ದದ್ದು ನಮ್ಮ ಶಾಲೆಯ ಹಿಂಬದಿ ಗುಡ್ಡದಲ್ಲಿ. ನಾನು ಓದಿದ್ದು ಸುಳ್ಯ ತಾಲೂಕಿನ ಜಯನಗರ ಶಾಲೆಯಲ್ಲಿ. ಮದ್ಯಾಹ್ನ ಊಟ ಆದ ಬಳಿಕ, ಆಟದ ವೇಳೆಯಲ್ಲಿ ನಾವು ಕಳ್ಳ ಪೋಲಿಸ್ ಆಟ ಆಡುತ್ತಿದ್ದೆವು. ನಮಗೆ ಅಡಗಿಕೊಳ್ಳಲು ಜಾಗ ಸಿಗುತ್ತಿದ್ದದ್ದೇ ಶಾಲೆಯ ಹಿಂಬದಿ ಗುಡ್ಡದಲ್ಲಿ. ಅಲ್ಲಿ ಗೇರು ಬೀಜದ ತೋಪು ಇತ್ತು. ಗೇರು ಬೀಜದ ಮರದ ಕೊಂಬೆಗಳ ಮೇಲೆ ಅಡಗಿಕೊಳ್ಳುತ್ತಿದ್ದೆವು .


ಆ ತೋಪಿನ ತುತ್ತ ತುದಿಯಲ್ಲಿ ಒಂದು ಗುಡಿಸಲು ಇತ್ತು. ಅರ್ಧ ಗೋಡೆ ಮಣ್ಣಿನಲ್ಲಿ ಕತ್ತಲಾಗಿತ್ತು.. ಉಳಿದರ್ಧ ಗೋಡೆಗೆ ತೆಂಗಿನ ಗರಿಗಳಿಂದ ಮಾಡಿದ್ದ ತಟ್ಟಿಗಳನ್ನು ಪೇರಿಸಲಾಗಿತ್ತು. ತೋಪಿನ ಅರೆಕತ್ತಲೆಯಲ್ಲಿ ಆ ಗುಡಿಸಲು ಒಂದು ವಿಚಿತ್ರ ಭಯವನ್ನು ಮೊದಲ ನೋಟಕ್ಕೆ ಹುಟ್ಟಿಸುತ್ತಿತ್ತು. ನಮ್ಮ ಗೆಳೆಯರು ಕೂಡ ಆ ಮನೆಯ ಬಗ್ಗೆ ಬಗೆಬಗೆಯ ಕತೆಗಳನ್ನು ಆಗಾಗ ಹೇಳುತ್ತಿದ್ದರು. ಹಾಗಾಗಿ ನಾವ್ಯಾರೂ ಅತ್ತ ಸುಳಿಯುತ್ತಿರಲಿಲ್ಲ. ಆ ಭಯs ಶಾಲೆ ಬಿಟ್ಟ ಮೇಲೂ ಹಾಗೆಯೇ ಉಳಿದಿತ್ತು.


ಇತ್ತೀಚಿಗೆ ನಮ್ಮ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ ಆಚರಣೆ ಇತ್ತು. ನಾವೆಲ್ಲಾ ಓದುತ್ತಿದ್ದಾಗ ರಾಷ್ಟ್ರೀಯ ಹಬ್ಬಗಳಿಗೆ ಅಣಿಯಾಗುತ್ತಿದ್ದ ಸಿದ್ಧವಾಗುತ್ತಿದ್ದ ಸಂಭ್ರಮ ನಮಗೆ ನೆನಪಾಯ್ತು. ಆ ಖುಷಿಯೊಂದಿಗೆ ಶಾಲೆಯ ಆವರಣವನ್ನೆಲ್ಲಾ ಬಣ್ಣದ ಕಾಗದಗಳಿಂದ ಸಿಂಗರಿಸಿದ್ದೆವು. ಕಾರ್ಯಕ್ರಮ ಆರಂಭಗೊಳ್ಳಲು ಸಮಯವಿತ್ತು. ಹಾಗಾಗಿ ನಾವು ಕಳ್ಳ ಪೊಲೀಸ್ ಆಟ ಆಡಲು ಆರಂಭಿಸಿದೆವು. ಅಟಗಿಕೊಳ್ಳಲು ಮತ್ತದೇ ಗೇರುಬೀಜದ ತೋಪಿನತ್ತ ಹೋದೆವು. ಆಗ ನಮ್ಮನ್ನು ಮತ್ತೆ ಕಾಡಿದ್ದು ದೆವ್ವ !

ಆಟ ಬಿಟ್ಟು ಈಗ ಪಾಳು ಬಿದ್ದಿರುವ ಆ ಗುಡಿಸಲಿನತ್ತ ನಾವು ಹೋದೆವು. ಶಾಲೆಯಲ್ಲಿ ಓದುತ್ತಿದ್ದಾಗ ಸಾಧ್ಯವಾಗದ ರಹಸ್ಯ ಭೇಧಿಸಲು ಈಗ ಸಮಯ ಕೂಡಿ ಬಂದಿತ್ತು. ಅಂತೂ ಇಂತು ಆ ಗುಡಿಸಲಿನ ಹತ್ತಿರ ಬಂದೆವು. ಹೆಜ್ಜೆಗಳು ಮಾತ್ರ ಹಿಂದೆ ಹಿಂದೆ ಸರಿಯುತ್ತಿದ್ದವು. ಈಗ ಆ ಗುಡಿಸಲು ಕುಸಿದು ಬಿದ್ದಿದೆ. ಅರೆ ಬರೆ ಮಣ್ಣಿನ ಗೋಡೆ ಮಾತ್ರ ಉಳಿದಿದೆ. ಇನ್ನೇನು ಒಳಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಗೆಳೆಯ ಪ್ರವೀಣ ಅಂದ... ಏರೋ ಪಾತೆರ್‍ಲೆಕ್ಕ ಆಂಡ್ ! ( ಯಾರೋ ಮಾತನಾಡಿದ ಹಾಗಾಯ್ತು !) ನಾವು ಎದ್ದೆವೋ ಬಿದ್ದೆವೋ ಅಂತ ಓಡಿದೆವು. ಸುಸ್ತು ಆಗಿ ಶಾಲೆಯ ಪಡಸಾಲೆಯಲ್ಲಿ ಬಿದ್ದುಕೊಂಡೆವು. ಕೊನೆಗೂ ರಹಸ್ಯ ಭೇದಿಸಲು ಸಾಧ್ಯವೇ ಆಗಲಿಲ್ಲ. ಕಾಯ೯ಕ್ರಮ ಎಲ್ಲಾ ಮುಗಿಯಿತು. ಶಾಲೆಯ ಅಭಿವೃದ್ದಿಗೆ ನಮ್ಮಿಂದಾಗುವಷ್ಟು ಸಹಾಯ ಮಾಡಿ ಮತ್ತೆ ನಮ್ಮ ನಮ್ಮ ಊರಿನತ್ತ ಹೊರಟು ನಿಂತಿದ್ದೆವು.

ಊರಿಗೆ ಮರಳುವ ಮುನ್ನ ಮತ್ತೊಮ್ಮೆ ದೆವ್ವವನ್ನು ನೋಡುವ ಇಚ್ಛೆಯಾಯಿತು. ಅದ್ಹೇಗೋ ನಮ್ಮ ಅವಾಂತರಗಳನ್ನೆಲ್ಲಾ ತಿಳಿದುಕೊಂಡ, ನಮ್ಮ ತಮಿಳು ಮಾಷ್ಟ್ರು ನಡೆದ ಕತೆಯನ್ನೆಲ್ಲಾ ನಮಗೆ ಹೇಳಿದರು. ಆ ಮನೆಯಲ್ಲಿದ್ದ ಅಜ್ಜಿ ವಿಧಿವಶರಾಗಿ ವರುಷಗಳೇ ಕಳೆದಿವೆಯಂತೆ. ದಿಕ್ಕಿಲ್ಲದ ಹೆಂಗಸು ಅವರಿವರ ತೋಟದಲ್ಲಿ ಕೆಲಸ ಮಾಡಿಕೊಂಡು ಬದುಕು ಸವೆಸುತ್ತಿದ್ದಳು, ಹಾಗಾಗಿ ನಮಗೆ ಅವಳನ್ನು ನೋಡುವ ಭಾಗ್ಯವೇ ಸಿಕ್ಕಿರಲಿಲ್ಲ. ವಿಷಯ ಗೊತ್ತಿಲ್ಲದ ನಮ್ಮಂತಹ ಅದೆಷ್ಟೋ ಮಕ್ಕಳು ಆ ತೋಪಿನಿಂದ ಗೇರು ಬೀಜಗಳನ್ನು ಕದಿಯುತ್ತಿರಲಿಲ್ಲ ಅನ್ನುವುದೇ ನೆಮ್ಮದಿಯ ಸಂಗತಿ. ಯಾಕೆಂದರೆ ಅಲ್ಲಿ ದೆವ್ವವಿತ್ತಲ್ಲ ! ನಮ್ಮಂತೆ ಅದೆಷ್ಟೋ ಮಕ್ಕಳ ಮನಸ್ಸಿನಲ್ಲಿ ಭಯದ ಮೂಲಕವೇ ಸ್ಥಾನ ಗಿಟ್ಟಿಸಿದ್ದ ಅಜ್ಜಿಯ ನೆನಪಿಗೆ ನಮ್ಮ ಶಾಲೆಗೆ ದೊಡ್ಡದೊಂದು ಗಡಿಯಾರ ನೇತು ಹಾಕಿ ಬಂದಿದ್ದೇವೆ. ಅಜ್ಜಿ ಬದುಕಿರುವಾಗ ನಾವು ಏನು ಮಾಡಲೂ ಸಾಧ್ಯವಾಗಿರಲಿಲ್ಲ.

ಮೊನ್ನೆ ವಿಜಯಕನಾ೯ಟಕದಲ್ಲಿ ಕತೆಯೊಂದು ಬಂದಿತ್ತು. ಅದನ್ನು ಓದಿ... ನಾನು ನನ್ನ ಬಾಲ್ಯಕ್ಕೆ ಮರಳಿದ್ದೆ.

Friday, September 19, 2008

ಮಕ್ಕಳಿಂದ ದೊಡ್ಡವರಿಗೆ ಬುದ್ಧಿ !

ಹುಬ್ಬಳ್ಳಿಯಿಂದ ನಮ್ಮ ವರದಿಗಾರ ಶರತ್ ಅವ್ರು ಇವತ್ತು ಒಂದು ವರದಿ ಕಳುಹಿಸಿದರು. ಹುಬ್ಬಳ್ಳಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶ್ರೀರಾಮ, ಏಸುಕ್ರಿಸ್ತ, ಅಲ್ಲಾನ ಫೋಟೋಗಳನ್ನು ಇರಿಸಿ ಆಯಾಯ ಧರ್ಮಗಳ ಆಚರಣೆಗಳ ಪ್ರಕಾರ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ. ನಿಜಕ್ಕೂ ವರದಿ ನೋಡಿ ತುಂಬ ಖುಷಿ ಆಯ್ತು. ಇದೇನು ಹೊಸ ವಿಷಯವಲ್ಲ, ಆದರೆ, ಈ ಸಂಧರ್ಭದಲ್ಲಿ ಆ ಮಕ್ಕಳ ಕಾರ್ಯ ತುಂಬ ಶ್ಲಾಘನೆಗೆ ಅರ್ಹವಾದದ್ದು.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಶಾಂತಿ ಮನೆ ಮಾಡಿದೆ. ಕೋಮು-ಕೋಮುಗಳ ನಡುವೆ ಸಂಘರ್ಷ ನಡೆಯುತ್ತಿದೆ. ಒಂದು ರೀತಿಯಲ್ಲಿ ಯಾರೂ ಕೂಡಾ ವಿವೇಚನೆಯಿಂದ ವರ್ತಿಸುತ್ತಿರುವ ಹಾಗೆ ಕಂಡು ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ, ದೊಡ್ಡವರು, ದೊಡ್ದವರೆನ್ನಿಸಿಕೊಂದವರು, ದೊಡ್ಡವರೆಂದು ಕರೆದುಕೊಳ್ಳುತ್ತಿರುವವರಿಗೆ ಬುದ್ಧಿ ಹೇಳುವ ಕಾರ್ಯವನ್ನು ಈ ಮಕ್ಕಳು ಮಾಡಿದ್ದರೆ. ರಾಷ್ಟ್ರಕವಿ ಕುವೆಂಪು ಅವರ ಮನುಜ ಮತ ವಿಶ್ವ ಪಥ ಕಲ್ಪನೆಯನ್ನು ಸಾಕಾರಮಾಡಿದ್ದಾರೆ. ಜಾತಿ-ಜಾತಿಗಳ ನಡುವೆ, ಮತಗಳ ನಡುವೆ ವಿಷ ಬೀಜ ಬಿತ್ತುವವರು ಈ ಮಕ್ಕಳನ್ನು ನೋಡಿ ಕಲಿಯುವಂತಹದ್ದು ತುಂಬಾ ಇದೆ ಅನ್ನಿಸ್ತಿದೆ. ಆಲ್ವಾ ?

Wednesday, September 17, 2008

ಅವಳು ಮತ್ತು ಪ್ರೀತಿ

ಆಕೆ ಅವನ ಬಳಿ ತುಟಿ ಬಿಚ್ಚಿ ಮಾತನಾಡದಿದ್ದರೂ, ಕಣ್ಣಿನ ಮಾತುಗಳು ಸಾವಿರ ಪದಗಳನ್ನು ಮೀರಿಸಿದ್ದವು. ಪ್ರೀತಿಯ ದ್ಯೋತಕವಾಗಿ ಮಳ್ಳಿಗೆಯ ಬಳ್ಳಿಯನ್ನು ಆಕೆಗೆ ನೀಡಿ ಬೇಗ ಬರುವೆನೆಂದು ತಿಳಿಸಿ ಊರಿಗೆ ಮರಳಿದ. ಆಕೆ ಅದನ್ನು ಜೋಪಾನವಾಗಿ ಬೆಳೆಸಿದಳು. ಬಳ್ಳಿ ಮಾವಿನ ಮರದ ಆಸರೆಯಲ್ಲಿ ವಿಸ್ತಾರವಾಗಿ ಬೆಳೆಯಿತು.

ಮೊಗ್ಗಾಯಿತು....ಹೂವಾಯಿತು.....ಬಾಡಿತು. ಆತನ ಸುಳಿವಿಲ್ಲ. ಅವನ ನೆನಪು ಮಾಸದಾದಾಗ ಅಕ್ಕನ ಕಂದನಿಗೆ ಆಸರೆಯಾದಳು. ಆ ಕಂದನ ಕಣ್ಣಲ್ಲಿ ಅವನ ಬಿಂಬ ಕಾಣುತ್ತಿದ್ದಳು. ಕಾಯುತ್ತಿದ್ದಳು. ಕೊನೆಗೂ ಆತ ಬಂದನೇ ಬಂದ. ಮಲ್ಲಿಗೆಯ ಬಳ್ಳಿ ಬಾಡಿತ್ತು. ಅದರ ಹಿಂದೆ ನಿಂತು ದಿಟ್ಟಿಸಿದ. ಇವಳ ಮಡಿಲಲ್ಲಿ ಕಿಲಕಿಲ ನಗುತ್ತಿತ್ತು ಮುದ್ದುಕಂದ. ಆತನ ಪ್ರೀತಿಯ ಕುಸುಮ ಅರಳುವ ಮೊದಲೇ ಬಾಡಿತ್ತು..ಬಂದ ದಾರಿಯಲ್ಲೇ ಹಿಂತಿರುಗಿದ. ಮಲ್ಲಿಗೆ ಬಳ್ಳಿಯ ಆಸರೆ ಕೊಂಡಿ ಕಳಚಿ ಬಿತ್ತು. ಪುನ ಆಕೆ ಅವನಿಗಾಗಿ ಅಲ್ಲೇ ಕಾದಳು.

Sunday, September 14, 2008

ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ


ಎಂದಿನಂತೆ ಆಫೀಸ್ಗೆ ಬರ್ತಾ ಇದ್ದೆ. ಆಫೀಸ್ ಮುಂದೆ ಪೋಲಿಸ್ ನಿಂತಿದ್ರು, ಗೇಟ್ ಹಾಕಲಾಗಿತ್ತು. ಒಳಗೆ ಬಂದು ನೋಡಿದ್ರೆ, ಗಲಾಟೆ ನಡೀತಾ ಇದೆ.... ಹೌದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅಲ್ಲಿ ದಾಳಿ ನಡೆಯುತ್ತಿತ್ತು. ಸುವರ್ಣ ಚಾನೆಲ್ ನವರು ಕ್ಷಮೆ ಕೇಳಬೇಕು ಅಂತ ಬಂದಿದ್ದವರು ಒತ್ತಾಯಿಸ್ತಾ ಇದ್ರು.

ಆದದ್ದು ಇಷ್ಟೇ, ಕಳೆದ ವಾರ ನಮ್ಮ ಚಾನೆಲ್ ನಲ್ಲಿ ಪ್ರಮೋದ್ ಮುತಾಲಿಕ್ ಅವರ ಸಂದರ್ಶನವೊಂದು ಪ್ರಸಾರವಾಗಿತ್ತು. ಆ ಕಾರ್ಯಕ್ರಮಕ್ಕೆ ಸಂಭಂದಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನ್ನುವ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಆಕ್ಷೇಪ ಎತ್ತಿದ್ದರು. ಪ್ರಮೋದ್ ಮುತಾಲಿಕ್ ಹೇಳಿದ್ದು ಅವರ ವೈಯುಕ್ತಿಕ ಅಭಿಪ್ರಾಯ, ಅದಕ್ಕೂ ನಮ್ಮ ಚಾನೆಲ್ ನ ನಿಲುವಿಗೂ ಯಾವುದೇ ಸಂಬಂಧವಿಲ್ಲ ಅಂತ ನಾವು ಎಷ್ಟೇ ಹೇಳಿದರು ಅದನ್ನು ಕೇಳುವ ತಾಳ್ಮೆ ಅವರಲ್ಲಿರಲಿಲ್ಲ. ಅವರು ಮಾತನಾಡುತ್ತಿದ್ದ ರೀತಿ ನೋಡಿದರೆ, ಅನುಚಿತವಾಗಿ ವರ್ತಿಸಲೆಂದೇ ಬಂದವರಂತಿತ್ತು. ಮುತಾಲಿಕ್ ವಾದಗಳನ್ನು ತಳ್ಳಿ ಹಾಕುತ್ತೀರಾ ? ನಿಮ್ಮ ಸ್ಟ್ಯಾಂಡ್ ಬಗ್ಗೆ ಹೇಳ್ತೀರಾ ? ಹಾಗಾದ್ರೆ, ಅದಕ್ಕೂ ನಾವು ಅವಕಾಶ ಮಾಡಿ ಕೊಡುತ್ತೇವೆ. ಅರ್ಧ ಗಂಟೆಗಳ ಕಾಲ ನಿಮಗೆ ಅವಕಾಶ ಕೊಡುತ್ತೇವೆ, ಮಾತನಾಡಿ ಅಂದ್ರೆ ಅದನ್ನೂ ಅವರು ಕೇಳಲಿಲ್ಲ. ಅನುಚಿತವಾಗಿ ವರ್ತಿಸಿದರು, ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರ ವಿಡಿಯೋ ಚಿತ್ರಣ ತೆಗೆದರು, ಸೆಲ್ ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು. ಪೊಲೀಸರು ಮಧ್ಯ ಪ್ರವೇಶಿಸಿ ಹೆಚ್ಚಿನ ಅನಾಹುತವನ್ನು ತಡೆದರು. ಈಗ ಆಫೀಸಿನ ಮುಂದೆ poleesaru ಇದ್ದಾರೆ. vaahiniya mUlaka ತಮ್ಮ ವಾದ ಮಂಡಿಸಲು ಅವಕಾಶ ನೀಡಿದ ಬಳಿಕವು ನಡೆಸಿದ ಇವರ ದುರ್ನಡತೆಯನ್ನು ಏನೆನ್ನಬೇಕು. ಇಂತಹವರಿಗೆಲ್ಲ ಬುದ್ಧಿ ಬರೋದು ಯಾವಾಗ ?

Wednesday, August 27, 2008

ಡಿವಿಜಿ ರಸ್ತೆ ದೇವೇಗೌಡ್ರದ್ದಾ ?

ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್‌ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ೨೦ರ ಆಸುಪಾಸು. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ. ಅವರ ಜ್ಞಾನದ್ದು.
ಆ ಹುಡುಗಿಯರು ಅಲ್ಲೇ ಎಲ್ಲೋ ಕಾಲೇಜಿಗೆ ಹೊರಟಿದ್ದಿರಬೇಕು. ಡಿವಿಜಿ ರಸ್ತೆಯೂ ಅವರಿಗೆ ತುಂಬಾ ಪರಿಚಯವಿದ್ದಂತಿತ್ತು. ಇಂಗ್ಲೀಷಿನಲ್ಲಿ ಅದೇನೋ ಮಾತನಾಡುತ್ತಿದ್ದರು. ನಾನು ಅದರ ಬಗ್ಗೆ ಗಮನ ಹರಿಸಿರಲಿಲ್ಲ. ಅವರನ್ನು ದಾಟಿ ನಾನು ಮುಂದೆ ಹೋಗುತ್ತಿದ್ದೆ. ಅಷ್ಟರಲ್ಲಾಗಲೇ, ಅವರಲ್ಲೊಬ್ಬಾಕೆ, ವಾಟ್‌ ಈಸ್‌ ದ ಫುಲ್‌ ಫಾಮ್‌೯ (ವಿಸ್ತೃತ ರೂಪ) ಆಫ್‌ ಡಿವಿಜಿ ರೋಡ್‌ ಯಾರ್‌ ಅಂತ ಕೇಳಿದ್ಳು. ಅದಕ್ಕೆ ಮತ್ತೊಬ್ಬಳು ದೇವೇಗೌಡ ರೋಡ್‌ ಯಾರ್‌ ಅಂದ್ಳು. ನಾನು ಬೆಚ್ಚಿಬಿದ್ದೆ ! ಅದ್ಯಾಕೋ, ನಾಡಿನ ಸಂಸ್ಕೃತಿ ಹಿರಿಮೆಯನ್ನು ಎತ್ತಿ ಹಿಡಿದ ಡಿವಿಜಿಯವರಿಗಿಂತಲೂ ದೇವೇಗೌಡ್ರು ಫೇಮಸ್‌ ಆಗಿಬಿಟ್ರಲ್ಲಾ ? (ದೇವೇಗೌಡ್ರು ಕ್ಷಮಿಸಬೇಕು ) ನಮ್ಮ ದೇಶದಲ್ಲಿ ರಾಜಕೀಯದ ಮುಂದೆ ಬೇರೇನೂ ಇಲ್ಲವೇನೋ ? ನಿಮಗೇನನ್ನಿಸತ್ತೆ ?

Sunday, August 24, 2008

ಗ್ರೀನ್ ಪೆನ್ನಿನ ಮಹಿಮೆ

ಮೊನ್ನೆ ಹೀಗೆ ಆಫೀಸ್ನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಮಾತಿನ ನಡುವೆ ಯಾರೋ ಪೆನ್ ಕೇಳಿದರು. ಮಾತು ಹೊರಳಿ ಪೆನ್ನುಗಳತ್ತಲೇ ತಿರುಗಾದತೊಡಗಿತು. ಆಗ ನನಗೆ ನೆನಪಾದದ್ದು... ನನ್ನ ಗ್ರೀನ್ ಪೆನ್ನು ! ಅದರ ಹಿಂದೆ ದೊಡ್ಡದೊಂದು ಕತೆ ಇದೆ. ನಂಗೆ ಬರೆಯೋದು ಹುಚ್ಚು, ಸಿಕ್ಕವನಿದ್ದಗಲೇ, ಕೈಗೆ ಸಿಕ್ಕಿದ್ದೆಲ್ಲವನ್ನೂ ಗೀಚುತ್ತಿದ್ದೆ. ಹಾಗಾಗಿ ಪೆನ್ನುಗಳೂ ನನ್ನಲ್ಲಿ ತುಂಬಾ ಇದ್ದವು. ಆಗ ಕಡಿಮೆ ಬೆಲೆಗೆ ಸಿಗುತ್ತಿದ್ದ ಪೆನ್ನುಗಳಲ್ಲಿ ತುಂಬಾ ವೆರೈಟಿ ಇರಲಿಲ್ಲ. ತುಂಬಾ ದುಡ್ಡು ಕೊಟ್ಟು ಪೆನ್ನು ಖರೀದಿಸುವ ಶಕ್ತಿ ನನ್ನಲ್ಲಿರಲಿಲ್ಲ.

ಆಗ ಬರುತ್ತಿದ್ದ ಪೆನ್ನುಗಲ್ಲಲ್ಲಿ (ನನ್ನ ಊರಲ್ಲಿ ಸಿಗುತ್ತಿದ್ದ) ಭಾರೀ ಫೇಮಸ್ ಆದದ್ದು ನಾಲ್ಕು ಕದ್ದಿಗಲಿದ್ದ ಪೆನ್ನು. ಅದರಲ್ಲಿ ನೀಲಿ, ಕೆಂಪು, ಕಪ್ಪು ಮತ್ತು ಹಸಿರು ಬಣ್ಣದ ಕದ್ದಿಗಲಿರುತ್ತಿದ್ದವು. ಕಪ್ಪು ಮತ್ತು ನೀಲಿ ಬಣ್ಣದವುಗಳನ್ನು ನಾನು ಬರೆಯಲು ಉಪಯೋಗಿಸುತ್ತಿದ್ದೆ. ನಮ್ಮ ಟೀಚರ್ ಕೆಂಪು ಬಂನದ್ದನ್ನು ಉಪಯೋಗಿಸುತ್ತಿದ್ದರು. ಹಾಜರಿ ಕರೆಯುವಾಗ ಅವರಿಗೆ ಪೆನ್ನು ಕೊಡಲು ನಾವು ಪೈಪೋಟಿ ನಡೆಸುತ್ತಿದ್ದೆವು.

ಆಗೆಲ್ಲಾ, ನಂಗೆ ಎಲ್ಲರಿಗಿಂತ ಡಿಫರೆಂಟ್ ಆಗಿ ಇರಬೇಕು ಅನ್ನುವ ಹುಚ್ಚು ಜಾಸ್ತಿ ಇತ್ತು. ಎಷ್ಟಾದರೂ ಓದಿನಲ್ಲಿ, ಇತರ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಎಲ್ಲರಿಗಿಂತ ಮುಂದೆ ಇದ್ದೆ. ಜೊತೆಗೆ ಊರಲ್ಲಿ ಫೇಮಸ್ ಆಗಿರುವ ನಮ್ಮ ಅಜ್ಜನ ನಾಮ ಬಲವೂ ನನ್ನ ಹಿಂದೆ ಇತ್ತು. ಹಾಗಾಗಿ ನಂಗೆ ಒಂಥರಾ ಇಮೇಜ್ ಇತ್ತು (ಅಹಂ ಅಂದರೂ ತಪ್ಪಲ್ಲ ) ಆ ಹುಚ್ಚಿನಿಂದಾಗಿಯೇ ನಾನು ಗ್ರೀನ್ ಪೆನ್ನಿನಲ್ಲಿ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು. ನಮಗೆ ಗಣಿತ ಹೇಳಿಕೊಡಲು ಅಶೀರ್ವಾದಂ ಅನ್ನುವ ಮಾಸ್ಟರ್ ಒಬ್ಬರಿದ್ದರು. ಅವರನ್ನು ಕಂಡರೆ ಭಯಂಕರ ಭಯ. ಅವರನ್ನು ತಮಿಳು ಮಾಸ್ಟರ್ ಅಂತ ಕರೆಯುತ್ತಿದ್ದೆವು.

ಗಣಿತ ನೋಟ್ಸ್ ಅನ್ನೇ ನಾನು ಗ್ರೀನ್ ಪೆನ್ನಿನಲ್ಲಿ ಬರೆದದ್ದು. ಶಾಲೆಗೆ ಹೋಗಿ ನೋಟ್ಸ್ ತೋರಿಸಿದ್ದೆ ತಡ, ತಮಿಳು ಮಾಸ್ಟರ್ ನಖಶಿಕಾಂತ ಉರಿದು ಹೋದರು. ನಾಗರ ಬೆಟ್ಟ ತೆಗೆದುಕೊಂಡು ಹೊಡೆದದ್ದೇ ಹೊಡೆದದ್ದು. ಮೂರುದಿನ ಶಾಲೆಗೆ ಕುಂಟುತ್ತಲೇ ನಡೆದಿದ್ದೆ. ಅವಾಗೆಲ್ಲ ಗ್ರೀನ್ ಪೆನ್ನಿನಲ್ಲಿ ಬೆರೆಯುವುದೆಂದರೆ ಡಿಸಿ ಮೊದಲಾದ ದೊಡ್ಡ ಹುದ್ದೆಯಲ್ಲಿ ಇರುವವರು ಮಾತ್ರ ಬರೆಯುತ್ತಿದ್ದರು. ಉಳಿದವರು ಗ್ರೀನ್ ಪೆನ್ನಿನಲ್ಲಿ ಬರೆಯುವುದು ಮಹಾಪರಾಧವಗಿತ್ತು. ನಾನು ಬರೆದಿದ್ದೆ, ಪೆಟ್ಟು ಬಿದ್ದಿತ್ತು. ಆವತ್ತೇ ಕೊನೆ, ಆಮೇಲೆ ಯಾವತ್ತಿಗೂ ಗ್ರೀನ್ ಪೆನ್ನಿನಲ್ಲಿ ಬರೆಯಲಿಲ್ಲ. ಒಂದು ವೇಳೆ ನಾನು ಡಿಸಿ ಆದರೆ ? ಆಗಲ್ಲ ಬಿಡಿ.

Friday, August 22, 2008

ಬಾಗಿನ - ಈಗ ರಾಜಕಾರಣಿಗಳ ಪ್ರಚಾರದ ವಸ್ತು !

ಬಾಗಿನ.... ಅದು ಸೌಭಾಗ್ಯ ಸಂಕೇತ.. ಅದನ್ನು ಸ್ತ್ರೀಧನ ಅಂತಲೂ ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಗುರವದಿಂದ ಮಂಗಳ ದ್ರವ್ಯಗಳನ್ನು ಕೊಡುವ ಈ ಸಂಪ್ರದಾಯ ತಲೆತಲಾನ್ತರಗಲಿನ್ದಲೂ ನಡೆದು ಬಂದಿದೆ. ಹೆಣ್ಣುಮಕ್ಕಳು ತೌರುಮನೆ ಬಿಟ್ಟು ಗಂಡನ ಮನೆಗೆ ಹೋಗುವುದನ್ನು ತ್ಯಾಗ ಎನ್ನಲಾಗುತ್ತದೆ. ಇದಕ್ಕೆ ಪ್ರತಿಯಾಗಿ ತಾಯಿ ಮನೆಯಿಂದ ಬಿದಿರಿನ ಮೊರದಲ್ಲಿ ಅಕ್ಕಿ, ಅದಕೆ, ವೀಳ್ಯ, ತೆಂಗಿನಕಾಯಿ, ರವಕೆ ಕಣ, ಸೀರೆ, ಚಿನ್ನ ಇತ್ಯಾದಿಗಳನ್ನು ತುಂಬಿ ಹೆಣ್ಣುಮಕ್ಕಳು ಸುಖವಾಗಿರಲೆಂದು ಹಾರೈಸುವುದು ವಾಡಿಕೆ. ಗೌರಿಹಬ್ಬದ ಸಂದರ್ಭದಲ್ಲಿ ಈ ಸಂಪ್ರದಾಯವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಹಾಗೆಯೇ ಭಾರತೀಯ ಸಂಪ್ರದಾಯದಲ್ಲಿ ನದಿಗಳನ್ನೂ ದೇವತೆಯೆಂದು ಪುಉಜಿಸಲಾಗುತ್ತದೆ. ಎಲ್ಲಾ ನದಿಗಳನ್ನೂ ಗಂಗೆ ಎಂದೇ ಭಾವಿಸಲಾಗುತ್ತದೆ. ರಾಜಮಹಾರಾಜರುಗಳು ತುಂಬಿ ಹರಿಯುವ ನದಿಗಳಿಗೆ ಬಾಗಿನ ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಿದ್ದರು. ಪ್ರಜಾಸತ್ತೆ ಜಾರಿಯಾದ ಬಳಿಕವೂ ಈ ಸಂಪ್ರದಾಯ ನಡೆದು ಬಂದಿದೆ. ರಾಜ್ಯದ ಮುಖ್ಯಮಂತ್ರಿಗಳು ಸಮಸ್ತ ಜನರ ಪರವಾಗಿ ನದಿಗಳಿಗೆ, ಜಲಾಶಯಗಳಿಗೆ ಬಾಗಿನ ಅರ್ಪಿಸುತ್ತಿದ್ದರು. ಇದು ಸತ್ಸಂಪ್ರದಾಯ ಅನ್ನುವ ಭಾವನೆ ನಿನ್ನೆ ಮೊನ್ನೆಯವರೆಗೂ ನನ್ನಲ್ಲಿತ್ತು.

ಮೊನ್ನೆ ಕೃಷಿ ಸಚಿವ ರವೀಂದ್ರನಾಥ್ ಅವರ ಬಾಗಿನ ಅರ್ಪಿಸುವ ಕಾರ್ಯಕ್ರಮ ನೋಡಿ ನಂಗೆ ನಿಜಕ್ಕೂ ...(ಕ್ಷಮಿಸಿ ಶಬ್ದ ಸಿಕ್ತಿಲ್ಲ) ಆವತ್ತು, ನಮ್ಮ ಸಚಿವರು ಸುಮಾರು ೬೦ ಬಸ್ ಗಳಲ್ಲಿ ಜನ ತುಂಬಿ ಕೊಂಡು ಹೋಗಿದ್ದರು. ಅಲ್ಲಿ ಭರ್ಜರಿ ಊಟದ ಏರ್ಪಾಡು ಮಾಡಲಾಗಿತ್ತು. ನನಗನ್ನಿಸಿದ್ದು ಇಷ್ಟೇ... ಸಂಪ್ರದಾಯದ ಹೆಸರಿನಲ್ಲಿ ಇಂತಹ ರಾಜಕಾರಣಿಗಳೆಲ್ಲ ಪ್ರಚಾರ ಪಡೆಯುವ ಗೀಳು ಹಚ್ಹ್ಚಿಕೊಂದಿದ್ದಾರ ? ಇಂತಹ ಸಂಪ್ರದಾಯಗಳೂ ಇವತ್ತು ರಾಜಕಾರಣಿಗಳ ಕೈಯಲ್ಲಿ ಬಲಿಯಾಗುತ್ತಿರುವುದು ನಿಜಕ್ಕೂ ದುರಂತ. ಸಾಂಪ್ರದಾಯಿಕ ಮೊರಗಳು ರಾಜಕಾರಣಿಗಳ ಕೈಯಲ್ಲಿ ನಲುಗುತ್ತಿವೆ. ಕೇವಲ ಮುಖ್ಯಮಂತ್ರಿಗಲಿಗಷ್ಟೇ ಸೀಮಿತವಾಗಿದ್ದ ಈ ಸಂಪ್ರದಾಯವನ್ನು ಇವತ್ತು ಎಲ್ಲ ಉಸ್ತುವಾರಿ ಸಚಿವರುಗಳು ಪಾಲಿಸುತ್ತಿದ್ದಾರೆ. ಆಯಾ ಪ್ರದೇಶಗಳ ಶಾಸಕರುಗಲೂ ಇದನ್ನೇ ಪಾಲಿಸುತ್ತಿದ್ದಾರೆ.

ಬಾಗಿನ ಸಲ್ಲಿಸಲೂ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲರಿಗಿಂತ ಮೊದಲು ನಾವಿರಬೇಕು ಅನ್ನುವ ಧಾವಂತ ದಿಂದಲೇ ಈಶ್ವರಪ್ಪನವರು ಜಲಾಶಯ ತುಂಬುವ ಮೊದಲೇ ಬಾಗಿನ ಅರ್ಪಿಸಿ ವಿವಾದಕ್ಕೆ ಗುರಿಯಾಗಿದ್ದರು. ಅದಾದ ಬಳಿಕ ಭದ್ರಾವತಿ ಶಾಸಕ ಸಂಗಮೇಶ್ ಕೂಡ ೧೨ ಬಸ್ ಗಳಲ್ಲಿ ಜನ ಹೇರಿಕೊಂಡು ಬಾಗಿನ ಅರಿಪಿಸಿ ಬಂದಿದ್ದರು. ಇದು ಸಂಪ್ರದಾಯದ ಹೆಸರಿನಲ್ಲಿ ಪ್ರಚಾರ ಪಡೆಯುವುದಲ್ಲದೆ ಮತ್ತಿನ್ನೇನು ? ಪುಕ್ಕಟೆ ಪ್ರಚಾರ ಪಡೆಯುವ ಯಾವ sಅಂದರ್ಭಗಳನ್ನೂ ರಾಜಕಾರಣಿಗಳು ಕಳೆದುಕೊಳ್ಳುವುದಿಲ್ಲ ಅನ್ನುವುದಂತೂ ವಾಸ್ತವ. ಆದರೆ ಇಂತಹ ದರ್ದು ರಾಜಕಾರಣಿಗಳಿಗೆ ಇದೆಯಾ ? ಇದ್ದರೆ ಅದಕ್ಕೆ ನಾವು ಯಾಕೆ ಅವಕಾಶ ಮಾಡಿ ಕೊಡಬೇಕು ?

Monday, August 18, 2008

ಆಕೆಗೆ ಎರಡು

1. ಪ್ರಿಯೇ ನಿನ್ನ
ಮಾತುಗಳೆಂದರೆ
ಹಾಗೆಯೇ
ಇಬ್ಬನಿಯ
ಚುಂಬನದ ಹಾಗೆ !

2. ಪ್ರಿಯೇ ನೀನು
ಒಲಿದರೆ ಹುಣ್ಣಿಮೆ
ಇಲ್ಲದಿದ್ದರೆ
ಅಮಾವಾಸ್ಯೆ!

ಅಬ್ಬಾ ! ಅದೆಂಥಾ ರಭಸ

ಮೊನ್ನೆ ಮಂಗಳೂರಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಐದೂ ನದಿಗಳು ತುಂಬಿ ಹರಿಯುತ್ತಿದ್ದವು. ಅಲ್ಲಿ ದುರಂತವೊಂದು ಸಂಭವಿಸಿತ್ತು. ಶಾಲೆಗೆಂದು ಹೊರಟ ಮಕ್ಕಳು ಮರಳಿ ಮನೆಗೆ ಬರಲೇ ಇಲ್ಲ. ಫಲ್ಗುಣಿ ನದಿಯಲ್ಲಿ ಮುಳುಗಿದ ಅವರ ಶಾಲಾ ಬಸ್ಸುಆ ಮಕ್ಕಳ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು. ಸ್ವಾತಂತ್ರ್ಯೋತ್ಸವಕ್ಕೆ ಅಣಿಯಾಗುತ್ತಿದ್ದ ಮಕ್ಕಳು ಈ ಲೋಕವನ್ನೇ ಬಿಟ್ಟು ಹೋದರು.
ಆ ಮಕ್ಕಳು ಉಜ್ವಲ ಭವಿಷ್ಯವನ್ನು ಅರಸುತ್ತಾ ಶಾಲೆಗೆ ತೆರಳುತ್ತಿದ್ದರು. ಸ್ವಾತಂತ್ರ್ಯದ ಸಂಭ್ರಮ ಅವರಲ್ಲಿ ಮನೆ ಮಾಡಿತ್ತು... ಎಂದಿನಂತೆ ಶಾಲಾ ವಾಹನದಲ್ಲಿ ಕುಣಿಯುತ್ತಾ ನಲಿಯುತ್ತಾ ಹೋಗುತ್ತಿದ್ದರು. ಮಂಗಳೂರಿನ ಗುರುಪುರದ ಸಮೀಪ ಉಲ್ಲಾಯಿಬೆಟ್ಟಿನ ಬಾಮಿ ಬಳಿ ಅವರ ಬಸ್ಸು ಬರುತ್ತಿದ್ದಂತೆಯೇ ಅದು ಫಲ್ಗುಣಿ ನದಿಗೆ ಬತ್ತು. ನಿತ್ಯ ಫಲ್ಗುಣಿಯ ಹರಿವನ್ನು ನೋಡಿ ಖುಷಿ ಪಡುತ್ತಿದ್ದ ಮಕ್ಕಳಿಗೆ, ಗುರುವಾರ ಅದೇ ಫಲ್ಗುಣಿ ಮೃತ್ಯು ದೇವತೆಯಾಗಿ ಅವತರಿಸಿದ್ದಳು.
ಅ ಚಿತ್ರಗಳು ನನ್ನ ಕಣ್ಣ ಮುಂದೆ ಬಂದದ್ದೆ ತಡ, ಅರಿವಿಲ್ಲದೆ ನನ್ನ ಕಣ್ಣಲ್ಲಿ ಕಂಬನಿ ಹರಿಯ ತೊಡಗಿತ್ತು. ತುಂಬಾ ವರ್ಷದ ಬಳಿಕ ನಾನು ಬಾಲ್ಯದ ನೆನಪುಗಳನ್ನು ಮೆಲುಕು ಹಾಕತೊಡಗಿದೆ. ನಾನೂ ಅಷ್ಟೆ, ಚಿಕ್ಕವನಿದ್ದಾಗ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗ, ಕೆರೆ ತೊರೆಗಳನ್ನು ದಾಟಿಕೊಂಡು ಹೋಗಬೇಕಿತ್ತು. ಕರಾವಳಿಯ ಮಳೆ ಅಂದರೆ, ಅದು ಭೋರ್ಗರೆತ. ಅದೂ ಹದಿನೈದು ವರ್ಷಗಳ ಹಿಂದಿನ ಮಳೆ. ಗುಡ್ಡ, ಕಾಡು ಮೇಡುಗಳನ್ನು ಹತ್ತಿ ಇಳಿದು ಶಾಲೆಗೆ ಹೋಗಬೇಕಿತ್ತು. ಒಂದೊಂದು ಸಲ ತೊರೆಗಳೆಲ್ಲ ತುಂಬಿ ಹರಿಯುತ್ತಿದ್ದವು. ಮಳೆ ನಿಂತು ಉಬ್ಬರ ಕಡಿಮೆಯಾದ ಬಳಿಕ ಮನೆ ತಲುಪಿ ಕೊಳ್ಳುತ್ತಿದ್ದೆವು. ಆ ಕಡೆಯಿಂದ ಅಜ್ಜ ಟಾರ್ಚು ಹಿಡಿದು ಕೊಂಡು ಬಂದ ದಿನಗಳೂ ಬಹಳಷ್ಟಿವೆ. ಮೊನ್ನೆಯ ಘಟನೆ ನೋಡಿದ ತಕ್ಷಣ ನನ್ನ ಮನಸ್ಸಿಗೆ ಬಂದದ್ದು ನಾನು ಬಾಲ್ಯದಲ್ಲಿ ಕಳೆದ ಆ ದಿನಗಳು. ಒಂದು ವೇಳೆ, ನಾನೂ ತೊರೆ ದಾಟುವಾಗ ಕೊಚ್ಚಿ ಹೋಗುತ್ತಿದ್ದರೆ ?

ಪಾಪ ಆ ಮಕ್ಕಳಿಗೆ ಬಸ್ಸಾದರೂ ಇತ್ತು. ನಾವು ನಡೆದುಕೊಂಡೇ ಬರಬೇಕಿತ್ತು. ಗುಡ್ಡದಿಂದ ನೀರು ಸರಾಗವಾಗಿ ಹರಿದು ಹೋಗುವ ಕರಣ, ಒಮ್ಮೆ ನೀರಿಗೆ ಬಿದ್ದರೆ ಸಾಕಿತ್ತು, ಅದರಿಂದ ಮೇಲೆಳುವುದಂತು ಸಾಧ್ಯವೇ ಇರಲಿಲ್ಲ. ಅಬ್ಬಾ ! ಅದನ್ನು ನೆನೆಸಿಕೊಂಡರೆ ಸಾಕು, ಮೈಎಲ್ಲ ಜುಮ್ ಅನ್ನುತ್ತದೆ. ಅ ಮಕ್ಕಳನ್ನು ನೋಡಿದಾಗ ನಂಗೆ ನೆನಪಾದದ್ದು ನನ್ನ ಬಾಲ್ಯ, ಆ ಭಯ. ಅದನ್ನು ನಿಮ್ಮ ಜೊತೆ ಹೇಳಿ ಕೊಳ್ಳಬೇಕಿತ್ತು ಅಷ್ಟೆ.