Friday, September 19, 2008

ಮಕ್ಕಳಿಂದ ದೊಡ್ಡವರಿಗೆ ಬುದ್ಧಿ !

ಹುಬ್ಬಳ್ಳಿಯಿಂದ ನಮ್ಮ ವರದಿಗಾರ ಶರತ್ ಅವ್ರು ಇವತ್ತು ಒಂದು ವರದಿ ಕಳುಹಿಸಿದರು. ಹುಬ್ಬಳ್ಳಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶ್ರೀರಾಮ, ಏಸುಕ್ರಿಸ್ತ, ಅಲ್ಲಾನ ಫೋಟೋಗಳನ್ನು ಇರಿಸಿ ಆಯಾಯ ಧರ್ಮಗಳ ಆಚರಣೆಗಳ ಪ್ರಕಾರ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ. ನಿಜಕ್ಕೂ ವರದಿ ನೋಡಿ ತುಂಬ ಖುಷಿ ಆಯ್ತು. ಇದೇನು ಹೊಸ ವಿಷಯವಲ್ಲ, ಆದರೆ, ಈ ಸಂಧರ್ಭದಲ್ಲಿ ಆ ಮಕ್ಕಳ ಕಾರ್ಯ ತುಂಬ ಶ್ಲಾಘನೆಗೆ ಅರ್ಹವಾದದ್ದು.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಶಾಂತಿ ಮನೆ ಮಾಡಿದೆ. ಕೋಮು-ಕೋಮುಗಳ ನಡುವೆ ಸಂಘರ್ಷ ನಡೆಯುತ್ತಿದೆ. ಒಂದು ರೀತಿಯಲ್ಲಿ ಯಾರೂ ಕೂಡಾ ವಿವೇಚನೆಯಿಂದ ವರ್ತಿಸುತ್ತಿರುವ ಹಾಗೆ ಕಂಡು ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ, ದೊಡ್ಡವರು, ದೊಡ್ದವರೆನ್ನಿಸಿಕೊಂದವರು, ದೊಡ್ಡವರೆಂದು ಕರೆದುಕೊಳ್ಳುತ್ತಿರುವವರಿಗೆ ಬುದ್ಧಿ ಹೇಳುವ ಕಾರ್ಯವನ್ನು ಈ ಮಕ್ಕಳು ಮಾಡಿದ್ದರೆ. ರಾಷ್ಟ್ರಕವಿ ಕುವೆಂಪು ಅವರ ಮನುಜ ಮತ ವಿಶ್ವ ಪಥ ಕಲ್ಪನೆಯನ್ನು ಸಾಕಾರಮಾಡಿದ್ದಾರೆ. ಜಾತಿ-ಜಾತಿಗಳ ನಡುವೆ, ಮತಗಳ ನಡುವೆ ವಿಷ ಬೀಜ ಬಿತ್ತುವವರು ಈ ಮಕ್ಕಳನ್ನು ನೋಡಿ ಕಲಿಯುವಂತಹದ್ದು ತುಂಬಾ ಇದೆ ಅನ್ನಿಸ್ತಿದೆ. ಆಲ್ವಾ ?

Wednesday, September 17, 2008

ಅವಳು ಮತ್ತು ಪ್ರೀತಿ

ಆಕೆ ಅವನ ಬಳಿ ತುಟಿ ಬಿಚ್ಚಿ ಮಾತನಾಡದಿದ್ದರೂ, ಕಣ್ಣಿನ ಮಾತುಗಳು ಸಾವಿರ ಪದಗಳನ್ನು ಮೀರಿಸಿದ್ದವು. ಪ್ರೀತಿಯ ದ್ಯೋತಕವಾಗಿ ಮಳ್ಳಿಗೆಯ ಬಳ್ಳಿಯನ್ನು ಆಕೆಗೆ ನೀಡಿ ಬೇಗ ಬರುವೆನೆಂದು ತಿಳಿಸಿ ಊರಿಗೆ ಮರಳಿದ. ಆಕೆ ಅದನ್ನು ಜೋಪಾನವಾಗಿ ಬೆಳೆಸಿದಳು. ಬಳ್ಳಿ ಮಾವಿನ ಮರದ ಆಸರೆಯಲ್ಲಿ ವಿಸ್ತಾರವಾಗಿ ಬೆಳೆಯಿತು.

ಮೊಗ್ಗಾಯಿತು....ಹೂವಾಯಿತು.....ಬಾಡಿತು. ಆತನ ಸುಳಿವಿಲ್ಲ. ಅವನ ನೆನಪು ಮಾಸದಾದಾಗ ಅಕ್ಕನ ಕಂದನಿಗೆ ಆಸರೆಯಾದಳು. ಆ ಕಂದನ ಕಣ್ಣಲ್ಲಿ ಅವನ ಬಿಂಬ ಕಾಣುತ್ತಿದ್ದಳು. ಕಾಯುತ್ತಿದ್ದಳು. ಕೊನೆಗೂ ಆತ ಬಂದನೇ ಬಂದ. ಮಲ್ಲಿಗೆಯ ಬಳ್ಳಿ ಬಾಡಿತ್ತು. ಅದರ ಹಿಂದೆ ನಿಂತು ದಿಟ್ಟಿಸಿದ. ಇವಳ ಮಡಿಲಲ್ಲಿ ಕಿಲಕಿಲ ನಗುತ್ತಿತ್ತು ಮುದ್ದುಕಂದ. ಆತನ ಪ್ರೀತಿಯ ಕುಸುಮ ಅರಳುವ ಮೊದಲೇ ಬಾಡಿತ್ತು..ಬಂದ ದಾರಿಯಲ್ಲೇ ಹಿಂತಿರುಗಿದ. ಮಲ್ಲಿಗೆ ಬಳ್ಳಿಯ ಆಸರೆ ಕೊಂಡಿ ಕಳಚಿ ಬಿತ್ತು. ಪುನ ಆಕೆ ಅವನಿಗಾಗಿ ಅಲ್ಲೇ ಕಾದಳು.

Sunday, September 14, 2008

ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ


ಎಂದಿನಂತೆ ಆಫೀಸ್ಗೆ ಬರ್ತಾ ಇದ್ದೆ. ಆಫೀಸ್ ಮುಂದೆ ಪೋಲಿಸ್ ನಿಂತಿದ್ರು, ಗೇಟ್ ಹಾಕಲಾಗಿತ್ತು. ಒಳಗೆ ಬಂದು ನೋಡಿದ್ರೆ, ಗಲಾಟೆ ನಡೀತಾ ಇದೆ.... ಹೌದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅಲ್ಲಿ ದಾಳಿ ನಡೆಯುತ್ತಿತ್ತು. ಸುವರ್ಣ ಚಾನೆಲ್ ನವರು ಕ್ಷಮೆ ಕೇಳಬೇಕು ಅಂತ ಬಂದಿದ್ದವರು ಒತ್ತಾಯಿಸ್ತಾ ಇದ್ರು.

ಆದದ್ದು ಇಷ್ಟೇ, ಕಳೆದ ವಾರ ನಮ್ಮ ಚಾನೆಲ್ ನಲ್ಲಿ ಪ್ರಮೋದ್ ಮುತಾಲಿಕ್ ಅವರ ಸಂದರ್ಶನವೊಂದು ಪ್ರಸಾರವಾಗಿತ್ತು. ಆ ಕಾರ್ಯಕ್ರಮಕ್ಕೆ ಸಂಭಂದಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನ್ನುವ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಆಕ್ಷೇಪ ಎತ್ತಿದ್ದರು. ಪ್ರಮೋದ್ ಮುತಾಲಿಕ್ ಹೇಳಿದ್ದು ಅವರ ವೈಯುಕ್ತಿಕ ಅಭಿಪ್ರಾಯ, ಅದಕ್ಕೂ ನಮ್ಮ ಚಾನೆಲ್ ನ ನಿಲುವಿಗೂ ಯಾವುದೇ ಸಂಬಂಧವಿಲ್ಲ ಅಂತ ನಾವು ಎಷ್ಟೇ ಹೇಳಿದರು ಅದನ್ನು ಕೇಳುವ ತಾಳ್ಮೆ ಅವರಲ್ಲಿರಲಿಲ್ಲ. ಅವರು ಮಾತನಾಡುತ್ತಿದ್ದ ರೀತಿ ನೋಡಿದರೆ, ಅನುಚಿತವಾಗಿ ವರ್ತಿಸಲೆಂದೇ ಬಂದವರಂತಿತ್ತು. ಮುತಾಲಿಕ್ ವಾದಗಳನ್ನು ತಳ್ಳಿ ಹಾಕುತ್ತೀರಾ ? ನಿಮ್ಮ ಸ್ಟ್ಯಾಂಡ್ ಬಗ್ಗೆ ಹೇಳ್ತೀರಾ ? ಹಾಗಾದ್ರೆ, ಅದಕ್ಕೂ ನಾವು ಅವಕಾಶ ಮಾಡಿ ಕೊಡುತ್ತೇವೆ. ಅರ್ಧ ಗಂಟೆಗಳ ಕಾಲ ನಿಮಗೆ ಅವಕಾಶ ಕೊಡುತ್ತೇವೆ, ಮಾತನಾಡಿ ಅಂದ್ರೆ ಅದನ್ನೂ ಅವರು ಕೇಳಲಿಲ್ಲ. ಅನುಚಿತವಾಗಿ ವರ್ತಿಸಿದರು, ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರ ವಿಡಿಯೋ ಚಿತ್ರಣ ತೆಗೆದರು, ಸೆಲ್ ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು. ಪೊಲೀಸರು ಮಧ್ಯ ಪ್ರವೇಶಿಸಿ ಹೆಚ್ಚಿನ ಅನಾಹುತವನ್ನು ತಡೆದರು. ಈಗ ಆಫೀಸಿನ ಮುಂದೆ poleesaru ಇದ್ದಾರೆ. vaahiniya mUlaka ತಮ್ಮ ವಾದ ಮಂಡಿಸಲು ಅವಕಾಶ ನೀಡಿದ ಬಳಿಕವು ನಡೆಸಿದ ಇವರ ದುರ್ನಡತೆಯನ್ನು ಏನೆನ್ನಬೇಕು. ಇಂತಹವರಿಗೆಲ್ಲ ಬುದ್ಧಿ ಬರೋದು ಯಾವಾಗ ?