Monday, June 27, 2016

ಶಿರಾಡಿಯಲ್ಲಿ ಆ ಮೂರು ಗಂಟೆಗಳು !

ಬಾಯಾರಿದ ಬಯಕೆಗಳಲಿ ಥಳಥಳಿಸುವ ನೀರು  ಕಣ್ಣಿಗೆ ಥಣ್ಣಗೆ ಮುತ್ತಿಡುತಿದೆ ಪ್ರೀತಿಯಂತ ಹಸಿರು….

ಶಿರಾಡಿ ! ನೀವು ಈ ಹೆಸರು ಕೇಳಿಯೇ ಇದ್ದೀರಿ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕಾದರೆ, 38 ಕಿಲೋಮೀಟರ್ ಗಳ ರೌದ್ರ ಸೌಂದರ್ಯವನ್ನು ಅನುಭವಿಸಲೇಬೇಕು. ಅಂದ ಹಾಗೆ, ನನಗೆ ಶಿರಾಡಿಯೇನೂ ಹೊಸದಲ್ಲ. ಎಳೆವೆಯಲ್ಲಿ ಅಮ್ಮನ ಪಲ್ಲಂಗ ಹಿಡಿದುಕೊಂಡು ಓಡಾಡಿದಷ್ಟೇ ಸಲೀಸಾಗಿ ಶಿರಾಡಿಯ ಕಾಡುಗಳಲ್ಲಿ ಕಳೆದು ಹೋದ ದಿನಗಳಿಗೇನೂ ಕಡಿಮೆ ಇಲ್ಲ. ಸರಿಯಾಗಿ ಲೆಕ್ಕ ಹಾಕಿದರೆ ಬದುಕಿನ ಕಾಲು ಭಾಗವನ್ನು ಶಿರಾಡಿಯ ತಪ್ಪಲುಗಳಲ್ಲೇ ಕಳೆದಿರಬಹುದು.

ಶಿರಾಡಿ ಅಂದ್ರೆ ಅದೇನೋ ಖುಷಿ. ಅದ್ರಲ್ಲೂ ಮಳೆ ಬಿತ್ತೆಂದರೆ ಸಾಕು. ಶಿರಾಡಿ ಇದ್ದಕ್ಕಿದ್ದಂತೆ ಬದಲಾಗಿಬಿಡುತ್ತದೆ. ಒಣಗಿದ ಗಿಡಗಳು, ಮರಗಳು ಎಲ್ಲವೂ ಅದೆಲ್ಲಿಂದಲೋ ಅದೇನೋ ಆವೇಶ ಮೈಮೇಲೆ ಬಂದತೆ, ಇದ್ದಕ್ಕಿದ್ದಂತೆ ಚಿಗಿತು ಕೂತುಕೊಳ್ಳುತ್ತವೆ. ಮುಂಗಾರಿನ ರಭಸಕ್ಕೆ ಜೋಕಾಲಿಯಾಡುತ್ತವೆ.

ಅದೆಲ್ಲಿಂದಲೋ ಧೋ.. ಧೋ… ಎನ್ನುತ್ತಾ ಓಡಿ ಬರುತ್ತದೆ ಮಳೆ… 6 ತಿಂಗಳು ದೂರ ಹೋಗಿದ್ದ ಪ್ರೇಮಿಯನ್ನು ಕಾಣಲು ಪ್ರೇಯಸಿ ತಹತಹಿಸುತ್ತಾಳಲ್ಲಾ.. ಹಾಗೇ, ಕೆಂಪು ಹೊಳೆ ಕುಣಿದು ಕುಪ್ಪಳಿಸುತ್ತಾಳೆ. ಮಳೆರಾಯನ ಆನಂದ ಭಾಷ್ಪಗಳನ್ನು ಮೊಗೆಮೊಗೆದು ತನ್ನೊಳಗೆ ಸೆಳೆದುಕೊಳ್ಳುತ್ತಾಳೆ.. ಪ್ರಶಾಂತವಾಗಿ ಪ್ರಿಯಕರನಿಗಾಗಿ ಕಾಯುತ್ತಿದ್ದ ಕೆಂಪುಹೊಳೆ ಕುಣಿಕುಣಿದು ಭೋರ್ಗರೆಯುತ್ತಾಳೆ. ಆಕೆಯ ರೌದ್ರತಾಂಡವಕ್ಕೆ ಜೀಗುಂಬೆ, ಹಕ್ಕಿ, ಕೀಟಗಳೇ ತಾಳ ತಂಬೂರಿ. ಆ ರುದ್ರನರ್ತನವನ್ನು ಹೈವೇಯಲ್ಲಿ ನಿಂತು ನೋಡಿದರೆ, ಎದೆಯೊಳಗೆ ಭಯ ತವುಡುಗಟ್ಟದಿದ್ದರೆ ಹೇಳಿ.

ಹೇಳಿ ಕೇಳಿ ಇದು ಜೂನ್. ಆಗಲೇ ಶಿರಾಡಿ ನೆನೆದು ತೊಪ್ಪೆಯಾಗಿ ಹೋಗಿದೆ. ಈಗ ಹೈವೆ ಬಿಟ್ಟು ಆಚೀಚೆ ಹೋಗುವುದು ತುಂಬಾ ರಿಸ್ಕಿ ಕೆಲಸ. ಕಾಲಿಟ್ಟಲ್ಲೆಲ್ಲಾ ಜಾರುತ್ತೆ. ಅಷ್ಟೇ ಯಾಕೆ, ಘಾಟಿ ರಸ್ತೆಯಲ್ಲಿ ಅತಿ ವೇಗದಲ್ಲಿ ನಿಮ್ಮ ಕಾರು ಚಲಾಯಿಸುವುದು ಕೂಡಾ ತುಂಬಾ ರಿಸ್ಕೇ. ಕೊಂಚ ಯಾಮಾರಿದ್ರೂ, ಯಮಪುರಿಗೆ ಗೋಲ್ಡ್ ಪಾಸ್ ಸಿಕ್ಕಿಬಿಡುತ್ತೆ. ಅಲ್ಲಿಗೆ ಹೋಗೋದಾದ್ರೆ, ಇನ್ನೊಂದು ತಿಂಗಳು ಕಾಯಿರಿ. ಮಳೆಯ ಆರಂಭದ ಅಬ್ಬರ ಕಡಿಮೆಯಾಗಿರುತ್ತದೆ. ಆದರೆ ಮಳೆ ಪ್ರಮಾಣ ಅಷ್ಟೇ ಇರುತ್ತದೆ. ಕಾಡು ಆಲ್ ಮೋಸ್ಟ್ ಸ್ವಚ್ಛವಾಗಿರುತ್ತದೆ. ಅದೇ ರೈಟ್ ಟೈಂ.

ಕಾಡಿನಲ್ಲಿ ನಡೆಯೋದೇ ರಿಸ್ಕಿ ಅಂದ್ಕೊಂಡ್ರೆ ಬಿಟ್ಟುಬಿಡಿ. ಬೆಳಗ್ಗೆ ಬೆಂಗಳೂರಿನಿಂದ 7 ಗಂಟೆಗೆ ಕಾರವಾರಕ್ಕೆ ಹೊರಡೋ ಟ್ರೈನ್ ಹತ್ತಿಕೊಳ್ಳಿ. ಸಕಲೇಶಪುರ ದಾಟಿದ ಮೇಲೆ ಅಪ್ಪಿ ತಪ್ಪಿ ಕೂಡಾ ಕಣ್ಣು ಮುಚ್ಚಿಕೊಳ್ಳಬೇಡಿ. ಮುಚ್ಚಿದ್ರೆ, ನಿಮಗೆ ಜೀವನದಲ್ಲಿ ಮತ್ತೆಂದಿಗೂ ಸ್ವರ್ಗ ಸಿಗೋದಿಲ್ಲ. ಆದ್ರೆ ಒಂದೇ ಕಂಡೀಷನ್. ನಿಮಗೆ ಪ್ರಕೃತಿಯನ್ನು ಆಸ್ವಾದಿಸೋ ಮನಸ್ಸು ಇರಬೇಕು.



ಟ್ರೇನ್ ಬೇಡ ಅಂದ್ರೆ ಕಾರು ತೆಗೆದುಕೊಂಡು ಹೊರಟುಬಿಡಿ. ಸಕಲೇಶಪುರದಿಂದ ಸ್ವಲ್ಪ ದೂರ ಹೋದರೆ ದೋಣಿಗಲ್ ಸಿಗುತ್ತದೆ. ಅಲ್ಲಿ ಬಿಸಿ ಕಾಫಿಯೋ, ಟೀಯನ್ನೋ ಸೇವಿಸಿ, ಬೋಂಡಾ ಮೆಲ್ಲುತ್ತಾ ಹೊರಟುಬಿಡಿ, ಬೇಕಿದ್ದರೆ ಕೈಯಲ್ಲೊಂದಿಷ್ಟು ಚಿಪ್ಸ್ ಪ್ಯಾಕ್ ಇರಲಿ. ಮುಂದೆ ಬರೀ ಚಳಿ. ಕಣ್ಣುಬಿಟ್ಟರೆ ಕಾಣೋದು ಹಸಿರ ಪಾತಳಿ. ಅದನ್ನು ಮನಸಾರೆ ಅನುಭವಿಸಿ.

ಬೆಂಗಳೂರು ಬಿಟ್ಟರೆ, ಭರ್ತಿ ಮೂರುಗಂಟೆಗೆಲ್ಲಾ ದೋಣಿಗಲ್ ತಲುಪಿಬಿಡುತ್ತೇನೆ. ಅಲ್ಲಿ ಹರಿಯೋ ಸಣ್ಣ ಝರಿಯಲ್ಲಿ ಮುಖಕ್ಕೆ ನೀರು ಚಿಮ್ಮಿಸಿ, ಪಕ್ಕದಲ್ಲೇ ಕಾಫಿ-ಭಜ್ಜಿ ತಿನ್ನುತ್ತಾ 15 ನಿಮಿಷ ಕಳೆದುಬಿಡುತ್ತೇನೆ. ಅಲ್ಲಿಂದಾಚೆಗೆ ನನ್ನ ಕಾರು ಯಾಕೋ ವೇಗ ಒಲ್ಲೆ ಅನ್ನುತ್ತದೆ. ಹೈವೇ ಬದಿ ಸ್ವಲ್ಪ ಗ್ಯಾಪ್ ಕಂಡ್ರೂ ಕಾರು ಸರಕ್ಕನೆ ನಿಂತುಕೊಂಡು ಬಿಡುತ್ತದೆ. 38 ಕಿಲೋಮೀಟರ್ ತಲುಪಲು ಏನಿಲ್ಲವೆಂದರೂ ನಂಗೆ ಮೂರು ಗಂಟೆ ಬೇಕೇ ಬೇಕು. ಇಲ್ಲದಿದ್ರೆ ನನ್ನ ಕಾರು, ಕ್ಯಾಮೆರಾ ಕಣ್ಣು ಎರಡೂ ಠೂ ಬಿಟ್ಟುಬಿಡುತ್ತವೆ !

ಮೊನ್ನೆಮೊನ್ನೆಯಷ್ಟೇ ಮತ್ತೆ ಶಿರಾಡಿ ಮಡಿಲಲ್ಲಿದ್ದೆ. ಧರಣಿಗೆ ಬೆಂಬಿಡದೆ ಮುಂಗಾರಿನ ಅಭಿಷೇಕವಾಗುತ್ತಿತ್ತು. ಅದು ಅಕ್ಷರಶ: ಮಹಾಮಸ್ತಕಾಭಿಷೇಕ. ಒಮ್ಮೆ ಜಿಟಿಜಿಟಿ ಮತ್ತೊಮ್ಮೆ ಧೋ ಧೋ.. ಮತ್ತೆ ಜಿಟಿಜಿಟಿ ಆ ಮೂರು ಗಂಟೆಗಳಲ್ಲಿ ಕೇಳಿಸಿದ್ದು ಅದರದ್ದೇ ಸದ್ದು. ಮೂರು ಗಂಟೆಗಳಲ್ಲಿ ಅದೆಷ್ಟು ಬಾರಿ ನೆಂದಿದ್ದೆನೋ, ಅದೆಷ್ಟು ಬಾರಿ ಮಳೆಯ ಹೊಡೆದ ತಾಳಲಾರದೆ ಕಾರಿನ ಒಳಗೆ ಮುದುಡಿ ಕೂತಿದ್ದೆನೋ… ಅಂತಹದ್ದೊಂದು ಅನುಭವಕ್ಕೆ ಮೈಮರೆತು ತುಂಬಾ ದಿನಗಳೇ ಆಗಿದ್ದವು. ಆ ಮೂರು ಗಂಟೆಗಳು ಒಂದು ವರ್ಷಕ್ಕಾಗುವಷ್ಟು ಹಸಿಹಸಿ ಉತ್ಸಾಹ ತುಂಬಿಕೊಟ್ಟಿದ್ದವು.

ಅದು ಬರೀ ಮುಂಗಾರು ಮಳೆಯಲ್ಲ…  ಜೀವೋತ್ಸವ ಗಾನ.

ಮೈಮನಗಳ ಕೊಂಬೆಯಲ್ಲಿ ಹೊಮ್ಮುವ ದನಿ ಇಂಪು. ನಾಳೆಗೆ ನನಸಾಗುವ ಕನಸಿನ ಹೂವರಳುವ ಕಂಪು.






Friday, June 24, 2016

ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ

ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ
ಟೀಂ ಇಂಡಿಯಾದಲ್ಲಿ ಮತ್ತೆ ಫ್ಯಾಬ್ 5 ಯುಗ

ಆತ ಕ್ರಿಕೆಟ್ ಜಗತ್ತಿನ ದೇವರು. ಭತರ್ಿ ಕಾಲು ಶತಮಾನ ಕಾಲ ಭಾರತೀಯ ಕ್ರಿಕೆಟ್ಟನ್ನು ಅಕ್ಷರಶ: ತನ್ನ ಭುಜದ ಮೇಲೆ ಹೊತ್ತು ಮೆರೆದ. ನೂರು ಕೋಟಿ ಜನರ ನಿರೀಕ್ಷೆಗಳ ಭಾರವನ್ನು ತನ್ನ ವಾಮನ ದೇಹದ ಮೇಲೆ ಹೊತ್ತು ಸಾಗಿದ. ಸಹಸ್ರ ಸಹಸ್ರ ರನ್ ಪೇರಿಸಿ, ಕೋಟಿ ಕೋಟಿ ಜನರ ಸಹಸ್ರ ಸಹಸ್ರ ಆಸೆಗಳನ್ನು ಈಡೇರಿಸಿದ. ಇನ್ಮೇಲೆ ನಾನು ಕ್ರಿಕೆಟ್ ಆಡಲ್ಲ ಎಂದಾಗ, ಕೊನೆಯ ಬಾರಿಗೆ ವಾಂಖೆಡೆ ಮೈದಾನದಿಂದ ಹೊರ ನಡೆದಾಗ ಅದೆಷ್ಟೋ ಲಕ್ಷ ಜನರು ಕ್ರಿಕೆಟ್ ಗೂ ಗುಡ್ ಬೈ ಹೇಳಿದರು. ದೇವರಿಲ್ಲದ ಕ್ರಿಕೆಟ್ ಧರ್ಮವನ್ನೇ ತ್ಯಜಿಸಿದರು. ಸಧ್ಯ ಭಾರತೀಯ ಕ್ರಿಕೆಟ್ ನಲ್ಲಿರುವವರೆಲ್ಲಾ ಆ ದೇವರ ಪರಮ ಭಕ್ತರಷ್ಟೇ.

ಆತ ಸಾಕ್ಷಾತ್ ಶಿವಶಂಕರ. ಬಂಗಾಳದ ವೀರಭದ್ರ. ಎದುರಾಳಿ ಸವಾಲೆಸೆದ್ರು ಸಾಕು, ಮೈದಾನದಲ್ಲಿ ಕಾಣಿಸುತ್ತಿದ್ದದ್ದು ಬರೀ ರೌದ್ರಾವತಾರ. ಮೈದಾನದಾಚೆಯೂ ಶಿವತಾಂಡವಕ್ಕೆ ಕೊರತೆ ಏನೂ ಇರಲಿಲ್ಲ. ಭಾರತೀಯ ಕ್ರಿಕೆಟಿಗರಿಗೆ ಹುಲಿಗಳು ಅಂತಾರೆ. ಆತನ ಕಾಲದಲ್ಲಿ ನಿಜಕ್ಕೂ ಅವರು ಹುಲಿಗಳೇ ಆಗಿದ್ದರು. ಲೀಡರ್ ಎಂದರೆ ಹೀಗೇ ಇರಬೇಕು ಎಂಬಂತೆ ಉದಾಹರಣೆಯಾಗಿ ನಿಂತದ್ದೇ ಆ ರಿಯಲ್ ಟೈಗರ್.

ಮೇಲಿನವರಿಬ್ಬರು ಭೋರ್ಗರೆಯುತ್ತಲೇ ಇದ್ದರು. ಅವರ ಸಿಡಿಲಬ್ಬರಕ್ಕೆ ಜಗತ್ತು ಥರಥರ ನಡುಗಿ ಹೋಗುತ್ತಿತ್ತು. ಜೊತೆಯಾಗಿ ನಿಂತಷ್ಟೂ ಹೊತ್ತು ಎದುರಾಳಿ ಪಾಳಯದಲ್ಲಿ ನೆಮ್ಮದಿ ಸುಳಿಯುತ್ತಲೇ ಇರಲಿಲ್ಲ. ಥ್ಯಾಂಕ್ ಗಾಡ್ ! ಅವರ ಉತ್ತುಂಗದ ಕಾಲದಲ್ಲಿ ಟಿ-20 ಕ್ರಿಕೆಟ್ ಹುಟ್ಟಿರಲಿಲ್ಲ. ಇದ್ದಿದ್ದರೆ, ಕ್ರಿಕೆಟ್ ಲೋಕದಲ್ಲಿ ಪ್ರಳಯ ಸೃಷ್ಟಿಯಾಗುತ್ತಿತ್ತು ! ಬೌಲಿಂಗ್ ಮಾಡಲು ಯಾರೂ ಇರುತ್ತಿರಲಿಲ್ಲ.

ಆತ ಗೋಡೆ. ಎಂತಹಾ ಬಿರುಗಾಳಿ, ಸಿಡಿಲಿನ ವೇಗದ ಬೌಲರ್ಗಳಿಗೂ ಹಿಮಾಲಯದಷ್ಟೇ ತಣ್ಣಗೆ ಅಡ್ಡ ನಿಂತ ಮಹಾ ಗೋಡೆ. ಒಂದರ್ಥದಲ್ಲಿ ಆತ ಭಾರತೀಯ ಕ್ರಿಕೆಟ್ ನ ಯುಗ ಪ್ರವರ್ತಕ. ಆತ ಭೋರ್ಗರೆಯುತ್ತಿರಲಿಲ್ಲ. ಸಮುದ್ರದ ಅಲೆಗಳಂತೆ ಶಾಂತವಾಗಿಯೇ ಅಪ್ಪಳಿಸುತ್ತಿದ್ದ. ಕ್ರೀಸಿನಲ್ಲಿದ್ದಷ್ಟೂ ಹೊತ್ತು ಮ್ಯಾಚ್ ಭಾರತದ ಕೈ ಜಾರುತ್ತಲೇ ಇರಲಿಲ್ಲ.

ಆತ ಬ್ಯಾಟ್ ಬೀಸುತ್ತಿದ್ದಷ್ಟೂ ಹೊತ್ತು ಮೈದಾನದಲ್ಲಿ ಅರಳುತ್ತಿದ್ದದ್ದು ಬರೀ ರಂಗವಲ್ಲಿಯಷ್ಟೇ. ಅಂತಹ ಕಲಾತ್ಮಕ ಮತ್ತೊಬ್ಬ ಆಟಗಾರ ಜಾಗತಿಕ ಕ್ರಿಕೆಟ್ ಗೆ ಮತ್ತೊಬ್ಬ ಸಿಕ್ಕಿಲ್ಲ. ಆ ಸ್ಟೈಲಿಶ್ ಆಟಗಾರ ಕ್ರಿಕೆಟ್ ನ ಘಟಾನುಘಟಿ ಬೌಲರ್ ಗಳಿಗೇ ಸವಾಲಾಗಿದ್ದ. ಅದರಲ್ಲೂ ಅತಿರಥರೆನಿಸಿದ ಕ್ಯಾಂಗರೂಗಳ ಪಾಲಿಗೆ ಆತ ಬಿಡಿಸಲಾರದ ಒಗಟೇ ಆಗಿಬಿಟ್ಟಿದ್ದ.

ವಿಕೆಟ್ ಬಿಟ್ಟುಕೊಡೋದ್ರಲ್ಲಿ ಮೇಲಿನ ಇಬ್ಬರೂ ಜಿಪುಣಾಗ್ರೇಸರರೇ. ಇಬ್ಬರೂ ಜೊತೆಯಾಗಿ ಪೈಪೋಟಿಗೆ ನಿಂತರೆ, ಮೈದಾನವಿಡೀ ಎದುರಾಳಿ ಬೌಲರ್ ಗಳ ಬೆವರಿನಿಂದ ಒದ್ದೆ ಒದ್ದೆ.

ಈ ಎರಡೂ ಸಾಲಿಗೆ ಸೇರದ ಮತ್ತೊಬ್ಬ ಅಗ್ರೇಸರನಿದ್ದ. ಎಲ್ಲರೊಳಗೊಂದಾಗದೇ ಇದ್ದುಕೊಂಡು, ಸದ್ದೇ ಇಲ್ಲದೆ ಸುದ್ದಿ ಮಾಡಿದ್ದ. ದವಡೆ ಮುರಿದರೂ ಮೈದಾನಕ್ಕೆ ಇಳಿದು ಒಂಟಿ ಸಲಗದಂತೆ ಕಾದಾಡಿದ್ದ. ದಾಯಾದಿ ವೈರಿಯ ಎಲ್ಲಾ ಹತ್ತು ವಿಕೆಟ್ ಗಳನ್ನು ಕಿತ್ತು ಮೆರೆದ ಸ್ಪಿನ್ ಬೌಲಿಂಗ್ ನ ಸಾರ್ವಭೌಮ ಆತ. ತಮ್ಮ ದೊಡ್ಡ ಪಾದಗಳಷ್ಟೇ ದೊಡ್ಡ ಮನಸ್ಸು ಹೊಂದಿರೋ ಜಂಬೋ ಆತ. ಹಿಂದೂ ಮಹಾಸಾಗರದಷ್ಟೇ ಪ್ರಶಾಂತ.

ಆಲ್ ಮೋಸ್ಟ್ ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್ ಎಂದರೆ ಆ ಐವರೇ. ಸಚಿನ್, ಗಂಗೂಲಿ, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ. ಫ್ಯಾಬ್ 5 ಅಂತಾನೇ ಫೇಮಸ್. ಅವರಿದ್ದ ಕಾಲ ಭಾರತೀಯ ಕ್ರಿಕೆಟ್ ನ ಉತ್ತುಂಗದ ಕಾಲವೂ ಆಗಿತ್ತು. 2011ರ ವಿಶ್ವಕಪ್ ಗೆದ್ದ ಬಳಿಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದರು. ಭಾರತಕ್ಕೆ ಮರಳಿ ವಿಶ್ವಕಪ್ ತರುವುದು ಅವರ ಜೀವಮಾನದ ಕನಸಾಗಿತ್ತು. ಸಚಿನ್ ಬಿಳಿ ಪ್ಯಾಂಟು, ಷಟರ್ು ಕಳಚಿಡೋ ಮೂಲಕ ಫ್ಯಾಬ್ -5 ಯುಗಾಂತ್ಯ ಕಂಡಿತು. ಅದಾದ ಬಳಿಕ, ಟೀಂ ಇಂಡಿಯಾ ಒಂದೇ ಒಂದು ಜಾಗತಿಕ ಟೂನರ್ಿ ಗೆದ್ದಿಲ್ಲ ಎನ್ನುವುದು ಸತ್ಯ.

ಕಾಲ ಚಕ್ರ ಮತ್ತೆ ಮತ್ತೆ ಸುತ್ತು ಹಾಕುತ್ತಂತೆ. ಆದರೆ ಭಾರತೀಯ ಕ್ರಿಕೆಟ್ ನ ಪಾಲಿಗೆ ಕಾಲ ಚಕ್ರ ತುಂಬಾ ಬೇಗನೇ ಒಂದು ಸುತ್ತು ಹಾಕಿ ಬಂದಿದೆ. ಭಾರತೀಯ ಕ್ರಿಕೆಟ್ ನ ರಥ ಎಳೆದ ಐವರು ಮಹಾನ್ ಕ್ರಿಕೆಟಿಗರು ಮತ್ತೆ ಒಂದಾಗಿದ್ದಾರೆ. ಕುಂಬ್ಳೆ ಮತ್ತೊಮ್ಮೆ ಜಂಬೋ ಸವಾರಿಗೆ ಸಿದ್ದರಾಗಿ ಬಂದಿರುವುದರೊಂದಿಗೆ ಮತ್ತೆ ಫ್ಯಾಬ್ -5 ಯುಗ ಆರಂಭವಾಗತೊಡಗಿದೆ.

ಇವರು ಕ್ರಿಕೆಟ್ ಬಿಟ್ಟರೂ, ಕ್ರಿಕೆಟ್ ಇವರನ್ನು ಬಿಡೋದಿಲ್ಲ. ದೇವರು ಮತ್ತೆ ಕಾಣಸಿಗದೇ ಹೋಗಬಹುದು. ಆದರೆ ದೇವರನ್ನು ಪೂಜಿಸದೇ ಇರಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್ ಮೊದಲು ಸೆಳೆದುಕೊಂಡಿದ್ದೇ ರಾಹುಲ್ ದ್ರಾವಿಡ್ ರನ್ನು. ಭಾರತದ ಮಹಾಗೋಡೆ ಈಗ ಮರಿಹುಲಿಗಳನ್ನು ತಯಾರಿಸೋ ದ್ರೋಣಾಚಾರ್ಯರಾಗಿದ್ದಾರೆ. ಭಾರತೀಯ ಕ್ರಿಕೆಟ್ ನ ಭವಿಷ್ಯ ಈಗ ದ್ರಾವಿಡ್ ಕೈಯಲ್ಲಿ ಸುರಕ್ಷಿತವಾಗತೊಡಗಿದೆ. ಸಚಿನ್ ಬಿಟ್ಟ ಬಳಿಕ ಬಿಸಿಸಿಐ ನಲ್ಲೂ ಬಹಳಷ್ಟು ನೀರು ಹರಿದಿದೆ. ಹಳೇ ರಕ್ತವೆಲ್ಲಾ (ಕೆಟ್ಟದ್ದು ಇದ್ದಿರಲೂ ಬಹುದು) ಬೆಟ್ಟಿಂಗ್ ಪ್ರವಾಹಕ್ಕೆ ಕೊಚ್ಚಿ ಹೋಗಿ, ಹೊಸ ರಕ್ತ ಹರಿದು ಬಂದಿದೆ. ಇಂತಹ ಸಮಯದಲ್ಲೇ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಓಪನಸರ್್ ಭಾರತೀಯ ಕ್ರಿಕೆಟ್ ಗೆ ಹೊಸ ಓಪನಿಂಗ್ ಕೊಡಲು ಕೈ ಜೋಡಿಸಿಬಿಟ್ಟರು. ಸಚಿನ್, ಗಂಗೂಲಿ ಜೊತೆಗೆ ಲಕ್ಷ್ಮಣ್ ಕೂಡಾ ಭಾರತೀಯ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸೇರಿಕೊಂಡು, ಕ್ರಿಕೆಟ್ ಗೆ ಹೊಸ ದಿಕ್ಕು ನೀಡಲಾರಂಭಿಸಿದ್ದರು. ಜಂಬೋ ಮಾತ್ರ ಕನರ್ಾಟಕ ಕ್ರಿಕೆಟ್ ಆಡಳಿತ, ಬಿಸಿಸಿಐನ ತಾಂತ್ರಿಕ ಸಮಿತಿ ಆಮೇಲೆ ಐಸಿಸಿ ಕೆಲಸ ಅಂತ ಕೊಂಚ ದೂರವೇ ಇದ್ದರು.

ಈಗ ಜಂಬೋ ಕೂಡಾ ಮತ್ತೆ ಭಾರತೀಯ ಕ್ರಿಕೆಟ್ ನ ಭಾಗವಾಗಿದ್ದಾರೆ. ಇನ್ನೇನು ಧೋನಿ ನಿರ್ಗಮಿಸೋ ದಿನಗಳೂ ಆಸುಪಾಸಿನಲ್ಲೇ ಇವೆ. ಅಲ್ಲಿಗೆ ಸಚಿನ್ ನಂತರದ ಮೂರು ಪೀಳಿಗೆ ಕ್ರಿಕೆಟ್ ನ ತೆರೆ ಮರೆಗೆ ಸರಿಯಲಿದೆ. ಕೊಹ್ಲಿ ನೇತೃತ್ವದಲ್ಲಿ ಉದಯೋನ್ಮುಖ ಆಟಗಾರರೇ ಭಾರತೀಯರ ಆಸೆಗಳನ್ನು ಹೊತ್ತು ಸಾಗಬೇಕಿದೆ. ಹೆಚ್ಚು ಕಮ್ಮಿ ಮುಂದಿನ ವರ್ಷ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ಹೀಗಾದಲ್ಲಿ, ನೇಪಥ್ಯದಲ್ಲೇ ಜೊತೆಯಾಗೋ ಈ ಫ್ಯಾಬ್ -5 ಮತ್ತೆ ಹೊಸ ಭಾರತದ ನೇತೃತ್ವ ವಹಿಸಲಿದ್ದಾರೆ. ಭಾರತೀಯ ಕ್ರಿಕೆಟ್ ನ ಭವಿಷ್ಯ ಮತ್ತೆ ಫ್ಯಾಬ್ 5 ಹೆಗಲಿಗೇರಿರುವುದು ಅಭಿಮಾನಿಗಳ ಪಾಲಿಗಂತೂ ದೀಪಾವಳಿಯಾಗಿದೆ. ಇತ್ತ ಕ್ರಿಕೆಟ್ ಗೆ ಹೊಸ ದೇವರೂ ಹುಟ್ಟಿಕೊಂಡಿದ್ದಾರೆ. ಜಂಬೋ ಸವಾರಿ ಕೆರಿಬಿಯನ್ ನಿಂದ ಆರಂಭವಾಗಲಿದೆ.


Monday, June 20, 2011

ಬಂಜೆ ಹೃದಯಕ್ಕೆ ಮೊದಲ ಹನಿ ಬಿತ್ತು !

ಗೆಳತಿಯನ್ನು ಮೆಜೆಸ್ಟಿಕ್ ಗೆ ಬಿಡಲು ಹೊರಟಿದ್ದೆ. ಇನ್ನು ಮೇಕ್ರಿ ಸರ್ಕಲ್ ದಾಟಿರಲಿಲ್ಲ. ಅಷ್ಟರಲ್ಲಾಗಲೇ ಕೈಮೇಲೆ ಮೊದಲ ಹನಿ ಬಿತ್ತು. ಅರೆ ಮಳೆ ! ನನ್ನ ಮನಸ್ಸೀಗ ಸೂತ್ರ ಹರಿದ ಗಾಳಿಪಟ. ಅಷ್ಟೊಂದು ಸಂಭ್ರಮ. ರೋಮಾಂಚನ.

ಅದೆಷ್ಟು, ಖುಷಿಯಾಗಿತ್ತೆಂದ್ರೆ, ನನಗೆ ಆಮೇಲೆ ಬೇರೇನೂ ಬೇಕಿರಲಿಲ್ಲ. ಮನದನ್ನೆಯ ಸೆರಗು ಹಾಗೆಯೇ ಸೋಕಿ ಹೋದಂತಹ ತಂಗಾಳಿ, ಎವೆ ಇಕ್ಕೋ ಮುನ್ನವೇ ಮುತ್ತಿನಂಥ ಹನಿಗಳ ಅಭಿಷೇಕ. ವ್ಹಾವ್ ! ಒಣಗಿ ಕಾವಲಿಯಂತಾದ ಬಂಜರು ಭೂಮಿಗೆ ಮೊದಲ ಹನಿ ಬೀಳತ್ತಲ್ಲ, ಧಾರಿಣಿಯ ಆ ಖುಷಿ ನನ್ನಲ್ಲಿ.

ತಲೆ ಮೇಲೆ ಬಿದ್ದ ಹನಿಗಳು ನಿಧಾನಕ್ಕೆ ಜಾರಿ ಕಿವಿಯ ಓಣಿಯಿಂದ ಬಾಗಿ ಭುಜವನ್ನ ಹನಿಸಿ ಹೊಟ್ಟೆಯಾಳಕ್ಕೆ ಇಳಿಯುವಾಗ ಅದೇನು ರೋಮಾಂಚನ. ಮೈಮೇಲೆ ಮೊದಲ ಮಳೆ ಬಿದ್ದ ಸಂಭ್ರಮಪೂರ್ತಿ ಅನಾವರಣ. ಹೊಸಾ ಮಳೆ- ಹಸೀ ಮಳೆ. ಒಂದಿಡೀ ವರ್ಷದ ಸಮೃದ್ಧ ಘಮಕ್ಕೆ ಸಾಕು ಈ ಮಳೆ. ಗೆಳತಿ ಊರಿಗೆ ಹೊರಟಳು ಅನ್ನೋ ಬೇಜಾರಿನ ಕ್ಷಣಕ್ಕೆ ಈ ಮಳೆ ಜೊತೆಗಾತಿ.

ಹಾಗಂತ ಬೆಂಗಳೂರಿಗೆನು ಇದು ಮೊದಲ ಮಳೆಯಲ್ಲ. ಒಮ್ಮೆ ಆಫೀಸ್ ಸೇರಿಕೊಂಡರೆ, ಹೊರಗೆ ಏನು ನಡೆಯುತ್ತಿದೆ ಅನ್ನೋದೇ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಎ ಸಿ ರೂಮಿನಲ್ಲಿ ಬಂಧಿಗಳು ನಾವು !

ಅಂದ ಹಾಗೆ ಕರಾವಳಿಯ, ಆಚೆ ಪಟ್ಟಣವು ಅಲ್ಲದ ಈಚೆ ಹಳ್ಳಿಯು ಅಲ್ಲದ ಪುಟ್ಟ ಊರಿನಿಂದ ಬಂದ ನಮ್ಮಂಥ ಹುಡುಗರಿಗೆ, ಅಸಲಿ ಇದು ಮಳೆಯೇ ಅಲ್ಲ. ನಮ್ಮ ಕಡೆ ಹೇಳುವ ಪಿರಿಪಿರಿ ಮಳೆ (ತುಂತುರು ಮಳೆ]. ಸಿಲಿಕಾನ್ ಸಿಟಿಯ ದೊಡ್ಡ ಮಳೆ ಕೂಡ ನಮ್ಮ ಜನರಿಗೆ, ಏನೋ ಬಂದು ಹೋಯ್ತು ಅನ್ನುವಂಥ ಮಳೆ ಅಷ್ಟೇ. ಬೆಂಗಳುರಿನಂಥ ಕಾಂಕ್ರೀಟ್ ಕಾಡು ಸೇರಿಕೊಂಡ ನಮಗೆ ಈಗೀಗ ಇದೂ ದೊಡ್ಡ ಮಳೆಯೇ. ಅದಕ್ಕೆ ಅಷ್ಟೊಂದು ಸಂಭ್ರಮಿಸಿದ್ದು.

ಹಾಗೆ ನೋಡಿದರೆ ಬೆಂಗಳೂರಿನದ್ದು, ಹಸಿವಾದಾಗ ಅಳುವ ಪುಟ್ಟ ಕಂದನಂತ ಮಳೆ. ಅದರಲ್ಲೂ, ಪಕ್ಕದ ಮನೆಯ ಮಕ್ಕಳನ್ನು ಎತ್ತಿಕೊಂಡಾಗ ಸಿಟ್ಟು ಬರತ್ತಲ್ಲ ಅಂತ ಮಳೆ. ಧಡಕ್ ಅಂತ ಸುರಿಯತ್ತೆ, ಅಷ್ಟೇ ವೇಗದಲ್ಲಿ ನಿಂತು ಬಿಡತ್ತೆ. ಅದರಲ್ಲೂ ಸ್ಕೂಲು, ಆಫೀಸ್ ಬಿಡೋ ವೇಳೆಗೆ ಸುರಿದು ಮರಗಳನ್ನು ಕಡಿದು ಹಾಕಿದ ಕೋಪ ತೀರಿಸಿಕೊಳ್ಳತ್ತೆ.

ಕರಾವಳಿಯದ್ದೋ ಅಮ್ಮನ ಹಾರೈಕೆ, ಹೆಂಡತಿಯ ಪ್ರೀತಿಯಂತ ಮಳೆ. ದಿನಪೂರ್ತಿ, ವಾರಗಟ್ಟಲೆ ಒಂದೇ ಸಮನೆ ಸುರಿಯುತ್ತಿರುತ್ತದೆ. ದೂರದಿಂದಲೇ ವಾರ್ನಿಂಗ್ ಕೊಡೊ ಧೋ ಅನ್ನೋ ಸದ್ದು, ಏನೋ ಆಗಿಯೇ ಬಿಡ್ತು ಎಂಬಂತೆ ಧಾವಂತದಿಂದ ಓಡಾಡೋ ದುಂಬಿಗಳು, ಪಟಪಟನೆ ಉದುರೋ ಮಾವು, ತಂಗಾಳಿ ಜೊತೆಗೆ ಬರೋ ಪರಿಮಳ..... ಆಹಾ... ಜಗತ್ತಿನಲ್ಲಿ ಇದಕ್ಕಿಂತ ಸೌಂದರ್ಯ ಬೇರೆ ಇಲ್ಲವೇ ಇಲ್ಲವೇನೋ.

ಕರಾವಳಿ ಮಳೆ ನೆನಪಿಗೆ ಬಂತು ಅಂದ್ರೆ ಇಲ್ಲಿ ಇರೋದು ಉಂಟೆ. ಅರೆ, ನಾನಾಗಲೇ, ಕೂತಲ್ಲೇ ಊರಿಗೆ ತಲುಪಿ ಬಿಟ್ಟೆ. ಅದೇ ಅಲ್ವ ನಾವು ಹರಿದ ಚಡ್ಡಿ ಹಾಕ್ಕೊಂಡು ಭರಪೂರ ಮಳೆಯಲ್ಲಿ ನೆನೆಯುತ್ತ ಜಾರಿ ಬೀಳ್ತಿದ್ದ ಗುಡ್ಡ . ಹೌದು ಅದೇ. ನೋಡಿ ನನ್ನ ಕೈಯಲ್ಲಿ ಪೇಪರ್ ಬೇರೆ ಇದೆ.... ನಾನೀಗ ದೋಣಿ ಮಾಡಬೇಕು.... ಮಳೆಯ ಹನಿ ಹನಿ ನೆನಪುಗಳನ್ನು ಆಮೇಲೆ ಹೇಳ್ತೇನೆ...

Saturday, March 12, 2011

GUÁæt

¦æAiÉÄÃ

¤£Àß ªÀÄgÉAiÀįÁgÀzÀ

£É£À¥ÀÄUÀ½UÉ

£À£Àß

PÀtÄÚUÀ¼Éà GUÁæt

¥Àæ±Éß

ªÀ¸ÀAvÀ ¸ÀÄj¹zÀ

E§â¤

PÀgÀUÀĪÀ ªÀÄÄ£ÀߪÉÃ

VæõÀä ¸ÀÄj¸À¨ÉÃPÉÃ

PÀA§¤ ?

ªÀÄÆqÀt

¥ÁævÀ

PÁ®zÀ°è

¸ÀÆAiÀÄð

ºÀÄlÄÖªÀ

ºÉjUÉ ªÀÄ£É

¦æÃvÀÄ PɪÀiÁä¬Ä

Tuesday, December 28, 2010

ಮತ್ತೆಂದೂ ಈ ವರ್ಷ ಬಾರದೆ ಇರಲಿ

ಹೌದು ಈ ಮಾತು ಹೇಳಲು ಕಾರಣವಿದೆ. ರಾಜ್ಯದ ಪಾಲಿಗೆ ಈ ವರ್ಷವಂತೂ ದುಸ್ವಪ್ನ ! ಪಾಲಿಟಿಕ್ಸ್ ನ ಗಲೀಜ್ ಟ್ರಿಕ್ಸ್ ಗೆ ಇಡೀ ರಾಜ್ಯವೇ ಬಲಿಯಾಗಿದೆ. ಅಭಿವೃದ್ದಿ ಅನ್ನೋದು ಕನಸಿನ ಗಂಟಾಗಿ ಉಳಿದಿದೆ.

ಅದ್ ಹ್ಯಾಗೋ, ಸರ್ಕಾರ ತೆವಳುತ್ತಾ ಕುಂಟುತ್ತ ಸಾಗಿತ್ತು. ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆದಿತ್ತು. ಹೊಸ ಸಫಾರಿ ಹೊಲಿಸಿಕೊಂಡ ಸಿಎಂ, ಗುಲ್ಬರ್ಗಕ್ಕೆ ಹೋಗಿದ್ರೆ, ಇಲ್ಲಿ ಮತ್ತೊಂದಿಷ್ಟು ಸಚಿವರು ಶಾಸಕರು ಚೆನ್ನೈ ಗೆ ಹಾರಿ ಹೋಗಿದ್ರು. ಸರ್ಕಾರ ಅಪಾಯಕ್ಕೆ ಸಿಲುಕಿತು.

ಆಮೇಲೆ ನಡೆಯಿತು ನೋಡಿ ಮಾಟ, ಮಂತ್ರ, ತಂತ್ರದ ಅನಾಚಾರ ! ಇಡೀ ರಾಜ್ಯಕ್ಕೆ ಇದಕ್ಕಿಂತ ದೊಡ್ಡ ಕಂಟಕ ಏನಿದೆ ಹೇಳಿ ? ಜನ ಛೀ ಥೂ ಅಂತ ಉಗಿದು ಉಪ್ಪಿನಕಾಯಿ ಹಾಕಿದರು ನಮ್ಮನ್ನಾಳುವ ಜನರಿಗೆ ಬುದ್ದಿ ಬರಲಿಲ್ಲ. ತಮಿಳುನಾಡು ಕೇರಳ ಅಂತ ಸುತ್ತಾಡಿದ್ದೆ ಸುತ್ತಾಡಿದ್ದು. ತಮ್ಮದೇ ಶಾಸಕರನ್ನು ನಂಬದ ಸಿಎಂಗೆ, ಅದ್ಯಾವುದೋ ದೇವರ ಮೇಲೆ, ಮಾಂತ್ರಿಕರ ಮೇಲೆ ನಂಬಿಕೆ ! ಜನರ ಆಶೀರ್ವಾದದಿಂದ ಗೆದ್ದ ಸಿಎಂ ಗೆ ಜನರ ಮೇಲು ವಿಶ್ವಾಸವಿರಲಿಲ್ಲ. ಇದ್ದಿದ್ರೆ, ಅವರು ಯಾವತ್ತೂ ರಾಜ್ಯವನ್ನು ಈ ಸ್ಥಿತಿಗೆ ತರುತ್ತಿರಲಿಲ್ಲ.

ಸಿಎಂ ವಿಚಾರ ಅತ್ತ ಕಡೆ ಇರಲಿ. ಪ್ರಜ್ಞಾವಂತ ರಾಜ್ಯದ ಮತ್ತೊಂದು ಕತೆ ಕೇಳಿ.

ಅದೊಂದು ಫೈನ್ ಡೇ . ನಾವೆಲ್ಲ ಗೌರವದಿಂದ ಕಾಣುವ ವಿಧಾನ ಸೌಧದ ಗೇಟುಗಳಲ್ಲೇ ಬಿದ್ದಿತ್ತು ನೋಡಿ ಹಳದಿ, ನಿಂಬೆ, ಗೊಂಬೆ, ಕುಂಕುಮ ! ಅದನ್ನು ನೋಡಿದ ಎಂಥವರಿಗೂ ಬೇರೆ ಯೋಚನೆಯೇ ಇಲ್ಲದೆ ಗೊತ್ತಾಗಿತ್ತು. ಅಲ್ಲಿ ವಾಮಾಚಾರ ನಡೆದಿತ್ತು. ವಿಧಾನಸೌಧಕ್ಕೆ ವಾಮಾಚಾರ !

ಬಹುಶ ರಾಜ್ಯದ ಜನತೆ ಕನಸಲ್ಲೂ ಇಂತಹ ಘಟನೆ ನೋಡಿರಲಿಕ್ಕಿಲ್ಲ. ಈಗಿನ ರಾಜಕಾರಣಿಗಳು ರಾಜ್ಯದ ಜನತೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದರೆ. ತಾವು ಅಧಿಕಾರಕ್ಕಾಗಿ ಏನೂ ಮಾಡಲು ಸಿದ್ಧ ಅಂತ ಘೋಷಿಸಿದ್ದಾರೆ. ೨೦೧೦ರ ಉದ್ದಕ್ಕೂ ಇಂತಹ ಘಟನೆಗಳು ನಡೆದೇ ಇವೆ. ಸೀನಿಯರ್ಸೆ ಮಾಡಿದ್ಮೇಲೆ ತಮಗೇನು ಅಂತ ಪಂಚಾಯತ್ ಚುನಾವಣೆಯಲ್ಲೂ ಮಾಟ ಮಂತ್ರದ ಪ್ರಯೋಗವಾಗಿದೆ.

ರಾಜಕಾರಣಿಗಳೇ ದಯವಿಟ್ಟು ಮನ ಮರ್ಯಾದೆಯಿಂದ ನಡೆದುಕೊಳ್ಳಿ. ಒಂದು ಕಾಲಕ್ಕೆ ಸ್ವಚ್ಚ ರಾಜಕಾರಣಕ್ಕೆ ಹೆಸರಾದ ನಾಡು ನಮ್ಮದು. ಮತ್ತೆಂದು ಹೀಗೆ ಮಾಡಬೇಡಿ. ರಾಜಕೀಯದ ಮಟ್ಟಿಗೆ, ಕನ್ನಡಿಗರು ೨೦೧೦ನ್ನು ಮರೆತುಬಿಡುತ್ತಾರೆ. ಇಂತಹ ವರ್ಷವನ್ನು ಮತ್ತೆ ತರಬೇಡಿ, ಪ್ಲೀಸ್ .

Saturday, July 31, 2010

ಮೌನಗಳ ಮಾತು

ಅವಳು, ಅಂದರೆ ಅವಳು. ವಯಸ್ಸು ೧೬ ಇರಬಹುದಷ್ಟೇ. ಅವಳು ನನ್ನ ಸ್ಪೂರ್ತಿ. ನನ್ನ ಜೀವನ, ನನ್ನ ಸರ್ವಸ್ವ. ಅವಳ ಹೆಸ್ರು ? ಗೊತ್ತಿಲ್ಲ. ಅವಳು ಯಾರು ಗೊತ್ತಿಲ್ಲ. ಅದಕ್ಕೆ ಅವಳು ಅವಳೇ. ಅವಳು ನಕ್ಕರೆ ಮಿಂಚಿನ ಕಾಂತಿ. ಬಿರಿದ ಸೂರ್ಯನಂತೆ ಅವಳ ಕಣ್ಣುಗಳು. ಆದ್ರೂ ಕೆಲವೊಮ್ಮೆ ತಂಪು ಚಂದಿರನಂತೆ. ಮೋಡದಿಂದ ಉದುರುವ ಹನಿಗಳಂತೆ ಅವಳ ನಡೆ. ಅವಳ ಕಾಲ್ಗೆಜ್ಜೆ ಕಿಣಿಕಿಣಿಗೆ ಬಸ್ಸೂ ಮೌನ.

ಹೌದು, ಆಕೆ ನನಗೆ ದಿನಾ ಬಸ್ಸಿನಲ್ಲಿ ಸಿಗುತ್ತಿದ್ದಳು. ಆಗ ಪಿಯುಸಿ. ಮನಸ್ಸು ಹುಚ್ಚು ಕುದುರೆ. ಕ್ಷಣದಲ್ಲಿ ಎಲ್ಲೆಂದರಲ್ಲಿ ಅಡ್ಡಾಡಿ ಬರುವಂತಹದ್ದು. ಕನಸುಗಳು ಆವಿರ್ಭವಿಸುವ ಕಾಲ. ಅವಳ ಮೊಗ ಕಂಡಾಗ ಮಾತು ಮೌನ. ಮನಸ್ಸು ಸ್ತಬ್ಧ. ಭಾವನೆಗಳು ಮಲಗುತ್ತವೆ. ಯೋಚನೆಗಳು ಹುಟ್ಟುತ್ತವೆ. ಪದಗಳು ಗೀಚಲ್ಪಡುತ್ತವೆ. ಅವುಗಳಿಗೆ ಕತೆ. ಕವನ, ಚುಟುಕುಗಳೆಂದು ನಾನಾ ಹೆಸರನ್ನು ಇಟ್ಟು ಸಾಹಿತಿಯಾಗಲು ಪ್ರಯತ್ನಿಸುತ್ತೇನೆ. ಸಂಭಾವಿತನೆನಿಸಿಕೊಳ್ಳುವ ಬಯಕೆ. ಬರವಣಿಗೆ ಒಂದು ಹುಚ್ಚು. ನನ್ನ ಹುಚ್ಚಿಗೆ ಅವಳೇ ಸ್ಪೂರ್ತಿ.

ನಮ್ಮ ನಡುವಿನ ಸಂಬಂಧ ಕೊಂಡಿ ಕೆಂಪು ಬಸ್ಸು. ಪ್ರತಿದಿನ ಅವಳನ್ನು ನೋಡುತ್ತಿದ್ದೆ. ಮಾತನಾಡಲೆಂದು ಬಾಯಿ ತೆರೆಯುತ್ತಿದ್ದೆ. ಆಗುತ್ತಿರಲಿಲ್ಲ. ದಿನವೂ ಹೀಗೆಯೇ ನಡೆಯುತ್ತಿತ್ತು. ಅವಳ ಸೌಂದರ್ಯವನ್ನು ಬಣ್ಣಿಸುವುದಷ್ಟೇ ನನ್ನ ಲೇಖನಿಗೆ ಕೆಲಸವಾಗಿತ್ತು. ಮೌನ ಸದಾ ಮೌನ. ಇಷ್ಟಾದ್ರೂ, ಅವಳ ಒಲವೆಂಬ ಮೌನ ಸಂಜೀವಿನಿ ನನ್ನ ಹಾಡಿಗೆ ಜೀವ ತುಂಬುತ್ತಿತ್ತು. ನಾನೆಲ್ಲೋ ಹಾಡುತ್ತಿದ್ದೆ. ಅವಳೆತ್ತಲೋ ನೋಡುತ್ತಿರುತ್ತಾಳೆ. ಬಸ್ಸು ಓಡುತ್ತಲೇ ಇರುತ್ತದೆ. ಇಳಿಯುವಲ್ಲಿ ಇಳಿಯುತ್ತಾಳೆ. ನನಗೆ ಮತ್ತಷ್ಟು ದೂರ ಅದೇ ಬಂಡಿಯ ಪಯಣ. ಛೇ ಅವಳು ನನ್ನ ಮನೆಯ ಪಕ್ಕದಲ್ಲೆ ಇರಬಾರದಿತ್ತೇ ? ಮನ ಕಾತರಿಸುತ್ತದೆ.

ದಿನಗಳು ಉರುಳಿದವು. ಈಗ ಅವಳಿಗೆ ಬೆರೆ ಬಸ್ಸು. ನಾನು ಮತ್ತೆ ಮತ್ತೆ ಅವಳು ಕುಳಿತುಕೊಳ್ಳುತ್ತಿದ್ದ ಅದೇ ಸೀಟನ್ನು ನೋಡಿ ಕನವರಿಸುತ್ತೇನೆ. ಈಗ ಮಾತುಗಳಿಗೆ ಜೀವವಿದೆ. ಸ್ಪೂರ್ತಿ ಇಲ್ಲ. ಮನಸ್ಸಿನ ಅಲೆದಾಟಗಳು ಅಲ್ಲಲ್ಲೇ ಅಡಗಿ ಕುಳಿತಿವೆ. ಮನಸ್ಸು ಸುಮ್ಮನೇ ಕೊರಗುತ್ತಿದ್ದರೂ ಅದಕ್ಕೆ ಸಾವಿರ ಕನಸುಗಳಿವೆ. ಮಾತಿಲ್ಲದೆ ಮನಸ್ಸು ವಿಭ್ರಾಂತವಾಗಿದೆ. ಅಳಲಾರದೆ ನಗುತ್ತೇನೆ..ನಗಲಾರದೆ ಅಳುತ್ತೇನೆ. ಏಳಲಾರದೆ ಬೀಳುತ್ತೇನೆ. ಪುಸ್ತಕಗಳು, ಹಾಳೆಗಳು, ಪೆನ್ನು ಕಲ್ಪನೆಗೆ ಬಣ್ಣ ಹಚ್ಚುತ್ತಿದ್ದ ವಸ್ತುಗಳೆಲ್ಲಾ ಸ್ಟ್ರೈಕ್ ಮಾಡ್ತಿವೆ. ಸೋ, ನೆನಪುಗಳಾ ಚಿತ್ರ ಬಿಚ್ಚಿ, ಕಣ್ಣೆದುರಿಗಿಟ್ಟುಕೊಂಡು ಹಾಗೇ ದಿಂಬಿಗೊರಗುತ್ತೇನೆ. ಕಂಬನಿ ಹನಿಕಿಸಿ ಒದ್ದೆ ಮಾಡುತ್ತೇನೆ. ಸುಂದರ ನೆನಪುಗಳ ಲೋಕದಲ್ಲಿ ಚಿನ್ನದ ಉಯ್ಯಾಲೆ ಕಟ್ಟುತ್ತೇನೆ. ತೂಗುತ್ತೇನೆ. ನಿದ್ದೆ ಹತ್ತುವುದಿಲ್ಲ. ಕನಸುಗಳಿಗೆ ಜೀವ ತುಂಬಲು ಹೆಣಗುತ್ತೇನೆ. ಈ ಹೆಣಗಾಟದಲ್ಲಿ ನಿದ್ದೆ ಬಂದದ್ದೇ ತಿಳಿಯುವುದಿಲ್ಲ. ಮೌನಗಳು ಹೊದಿಕೆಯಾಗುತ್ತವೆ..... ಮಾತುಗಳು ಹಾಸಿಗೆಯಾಗುತ್ತವೆ.

ಪ್ರಶ್ನೆ ಕಾಡುತ್ತದೆ. ಯಾಕೆ ಹೀಗೆ ? ನಾನೇನೂ ಭಗ್ನ ಪ್ರೇಮಿ ಅಲ್ಲ. ಅಥವಾ ಅವಳನ್ನು ಪ್ರೀತಿಸಿ, ವಿಫಲವಾದವನೂ ಅಲ್ಲ. ಅಸಲಿ ಅವಳನ್ನು ಆ ದೃಷ್ಟಿಯಿಂದ ನೋಡಿದವನೂ ಅಲ್ಲ. ಅವಳನ್ನು ಕೇವಲ ಸ್ಪೂರ್ತಿಯಾಗಿ ಕಂಡೆ. ಅವಳಿಲ್ಲದೆ ಏನೂ ಇಲ್ಲ. ಬರೆಯಲು ಬೆರಳುಗಳು ಓಡುತ್ತಿಲ್ಲ. ಬರವಣಿಗೆ ಇಲ್ಲದೆ ಜೀವನವಿಲ್ಲ. ಬದುಕಬೇಕು. ಏನೋ ಬರೆಯಲು ಹೋಗುತ್ತೇನೆ.... ಅದು ಮತ್ತಿನ್ನೇನೋ ಆಗುತ್ತದೆ. ಕಳೆದ ದಿನಗಳ ಆಕೆಯ ನೆಪದಲ್ಲೇ ಪದಗಳ ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಸೃಷ್ಟಿಕರ್ತನೆನಿಸಿಕೊಳ್ಳಲು. ಆದರೂ ಅವಳ ನೆನಪು ಕಾಡುತ್ತಲೇ ಇರುತ್ತದೆ.

ಬಹುಷ: ನೆನಪುಗಳು ಹೊಚ್ಚ ಹೊಸದಾಗಿ ಕಾಡಾಲು ಅವಳ ಮೌನವೇ ಕಾರಣವಿರಬಹುದು. ಅವಳ ಜೊತೆ ಮಾತನಾಡಿದ್ದಿದ್ದರೆ, ತಪ್ಪುಗಳು ನಡೆದು, ನಮ್ಮ ಸಂಬಂಧ ಹಳಸಬಹುದಿತ್ತು. ಈಗ ಆ ನೋವಿಲ್ಲ. ನಮ್ಮ ನಡುವೆ ಉಲಿದು ಹೋದ ಮೌನ ನಮ್ಮ ಸಂಬಂಧವನ್ನು ನಿತ್ಯ ನೂತನಗೊಳಿಸುತ್ತಿದೆ. ಮೌನಗಳ ಮಾತು ಎಷ್ಟು ಮಧುರ ? ಆ ನೆನಪು ಎಷ್ಟೊಂದು ಸಿಹಿ. ಆ ಮೌನ ಮತ್ತಷ್ಟು ದಿನ ಉಳಿಯಲಿ. ಆ ಹುಡುಗಿ ಮತ್ತೆ ನನ್ನ ಮುಂದೆ ಮೌನವಾಗಿ ನಲಿದಾಡಬೇಕು. ಸ್ಪೂರ್ತಿ ನೀಡಬೇಕು. ಇಂತಹ ಆಸೆಗಳಿಗೇನೂ ಕಮ್ಮಿ ಇಲ್ಲ. ಮೌನಗಳ ಆ ಮಧುರ ನೆನಪುಗಳೇ ಹಾಗೆ, ಬೇಕಾದಾಗ್, ಬೇಡವಾದಾಗಲೆಲ್ಲಾ ಧುತ್ತೆಂದು ಕಾಡಿ ಮರೆಯಾಗುತ್ತವೆ. ಉಳಿಯೋದು ಕನವರಿಕೆ ಮಾತ್ರ. ಆ ಕನವರಿಕೆಯಲ್ಲೇ ಪುಟ್ಟದೊಂದು ಸ್ವರ್ಗ ಸೃಷ್ಟಿಯಾಗುತ್ತದೆ. ಅಲ್ಲಿ ಎಲ್ಲವೂ ನಾನೇ. " ಆವ ರೂಪದೊಳು ಬಂದರೂ ಸರಿಯೇ, ಆವ ವೇಷದೊಳು ನಿಂದರೂ ಸರಿಯೇ.... ಹೊಸ ಬಾಳಿನ, ಹೊಸ ಗಾಳಿಯ, ಹೊಸ ಸ್ಪೂರ್ತಿಯ ತಾ ಹುಡುಗಿ ಅಂತ ಗರ್ಭದ ಕೂಸು ಪಿಸುಗುಡುತ್ತದೆ. ಆಕೆ ಎಲ್ಲಿ ? ವರ್ಷಗಳು ಉರುಳಿದ್ರೂ ನನ್ನ ಕಣ್ಣು ಹುಡುಕ್ತಾನೇ ಇವೆ...

Monday, December 8, 2008

ಏನೋ ಹೇಳಬಹುದಿತ್ತು

ನಾನು ನಿನಗೆ ಏನೋ ಹೇಳಬಹುದಿತ್ತು
ನೀನೂ ನನಗೆ ಏನೋ ಹೇಳಬಹುದಿತ್ತು
ಏನೂ ಹೇಳದೆಯೇ ಕಳೆದು ಹೋಯಿತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

ಆ ದಾರಿಯ ತುಂಬಾ ಮುಳ್ಳುಗಳಿದ್ದವು
ನೀನು ಜತೆಗಿದ್ದಾಗ ಗೊತ್ತೇ ಇರಲಿಲ್ಲ
ಸವೆಸಿ, ಸವೆಸಿ ಒಂಟಿಯಾದ ಪಯಣಿಗನಿಗೆ
ಏನೋ ಹೇಳಬಹುದಿತ್ತು.

ನೀನು ನಡೆದ ನೆಲ ಮಿದುವಾಗಿದೆ. ಅದು
ನನ್ನೆದೆ ಎಂದು ತಿಳಿದದ್ದು ನೀನು ತೀರ
ತಲುಪಿದ ಮೇಲೆಯೇ, ನಿನಗೆ
ಏನೋ ಹೇಳಬಹುದಿತ್ತು.

ಸಂಜೆಗಳನ್ನೆಲ್ಲಾ ಸುಮ್ಮನೆ ಪುಡಿಗಟ್ಟಿದೆವು
ನೀನು ಮೌನವಾಗಿ, ನಾನು ಕಿವುಡನಾಗಿ
ಕೂತು ಕೂತು ಹಾಗೇ ಎದ್ದು ಹೋಗಿದ್ದೆವು
ಏನೋ ಹೇಳಬಹುದಿತ್ತು.

ಬದುಕಿನಲ್ಲಿ ಕನಸುಗಳನ್ನು ತೇಲಿಬಿಟ್ಟೆವು
ಶೂನ್ಯವೇ ಮಿತಿಯೆಂಬಂತೆ
ಕೊನೆಗೆ ಉಳಿದದ್ದು ಅದು ಮಾತ್ರ- ಬೆಚ್ಚಗಾಗಿ
ಇಬ್ಬರಿಗೂ ಏನೋ ಹೇಳಬಹುದಿತ್ತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.