Monday, June 27, 2016

ಶಿರಾಡಿಯಲ್ಲಿ ಆ ಮೂರು ಗಂಟೆಗಳು !

ಬಾಯಾರಿದ ಬಯಕೆಗಳಲಿ ಥಳಥಳಿಸುವ ನೀರು  ಕಣ್ಣಿಗೆ ಥಣ್ಣಗೆ ಮುತ್ತಿಡುತಿದೆ ಪ್ರೀತಿಯಂತ ಹಸಿರು….

ಶಿರಾಡಿ ! ನೀವು ಈ ಹೆಸರು ಕೇಳಿಯೇ ಇದ್ದೀರಿ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕಾದರೆ, 38 ಕಿಲೋಮೀಟರ್ ಗಳ ರೌದ್ರ ಸೌಂದರ್ಯವನ್ನು ಅನುಭವಿಸಲೇಬೇಕು. ಅಂದ ಹಾಗೆ, ನನಗೆ ಶಿರಾಡಿಯೇನೂ ಹೊಸದಲ್ಲ. ಎಳೆವೆಯಲ್ಲಿ ಅಮ್ಮನ ಪಲ್ಲಂಗ ಹಿಡಿದುಕೊಂಡು ಓಡಾಡಿದಷ್ಟೇ ಸಲೀಸಾಗಿ ಶಿರಾಡಿಯ ಕಾಡುಗಳಲ್ಲಿ ಕಳೆದು ಹೋದ ದಿನಗಳಿಗೇನೂ ಕಡಿಮೆ ಇಲ್ಲ. ಸರಿಯಾಗಿ ಲೆಕ್ಕ ಹಾಕಿದರೆ ಬದುಕಿನ ಕಾಲು ಭಾಗವನ್ನು ಶಿರಾಡಿಯ ತಪ್ಪಲುಗಳಲ್ಲೇ ಕಳೆದಿರಬಹುದು.

ಶಿರಾಡಿ ಅಂದ್ರೆ ಅದೇನೋ ಖುಷಿ. ಅದ್ರಲ್ಲೂ ಮಳೆ ಬಿತ್ತೆಂದರೆ ಸಾಕು. ಶಿರಾಡಿ ಇದ್ದಕ್ಕಿದ್ದಂತೆ ಬದಲಾಗಿಬಿಡುತ್ತದೆ. ಒಣಗಿದ ಗಿಡಗಳು, ಮರಗಳು ಎಲ್ಲವೂ ಅದೆಲ್ಲಿಂದಲೋ ಅದೇನೋ ಆವೇಶ ಮೈಮೇಲೆ ಬಂದತೆ, ಇದ್ದಕ್ಕಿದ್ದಂತೆ ಚಿಗಿತು ಕೂತುಕೊಳ್ಳುತ್ತವೆ. ಮುಂಗಾರಿನ ರಭಸಕ್ಕೆ ಜೋಕಾಲಿಯಾಡುತ್ತವೆ.

ಅದೆಲ್ಲಿಂದಲೋ ಧೋ.. ಧೋ… ಎನ್ನುತ್ತಾ ಓಡಿ ಬರುತ್ತದೆ ಮಳೆ… 6 ತಿಂಗಳು ದೂರ ಹೋಗಿದ್ದ ಪ್ರೇಮಿಯನ್ನು ಕಾಣಲು ಪ್ರೇಯಸಿ ತಹತಹಿಸುತ್ತಾಳಲ್ಲಾ.. ಹಾಗೇ, ಕೆಂಪು ಹೊಳೆ ಕುಣಿದು ಕುಪ್ಪಳಿಸುತ್ತಾಳೆ. ಮಳೆರಾಯನ ಆನಂದ ಭಾಷ್ಪಗಳನ್ನು ಮೊಗೆಮೊಗೆದು ತನ್ನೊಳಗೆ ಸೆಳೆದುಕೊಳ್ಳುತ್ತಾಳೆ.. ಪ್ರಶಾಂತವಾಗಿ ಪ್ರಿಯಕರನಿಗಾಗಿ ಕಾಯುತ್ತಿದ್ದ ಕೆಂಪುಹೊಳೆ ಕುಣಿಕುಣಿದು ಭೋರ್ಗರೆಯುತ್ತಾಳೆ. ಆಕೆಯ ರೌದ್ರತಾಂಡವಕ್ಕೆ ಜೀಗುಂಬೆ, ಹಕ್ಕಿ, ಕೀಟಗಳೇ ತಾಳ ತಂಬೂರಿ. ಆ ರುದ್ರನರ್ತನವನ್ನು ಹೈವೇಯಲ್ಲಿ ನಿಂತು ನೋಡಿದರೆ, ಎದೆಯೊಳಗೆ ಭಯ ತವುಡುಗಟ್ಟದಿದ್ದರೆ ಹೇಳಿ.

ಹೇಳಿ ಕೇಳಿ ಇದು ಜೂನ್. ಆಗಲೇ ಶಿರಾಡಿ ನೆನೆದು ತೊಪ್ಪೆಯಾಗಿ ಹೋಗಿದೆ. ಈಗ ಹೈವೆ ಬಿಟ್ಟು ಆಚೀಚೆ ಹೋಗುವುದು ತುಂಬಾ ರಿಸ್ಕಿ ಕೆಲಸ. ಕಾಲಿಟ್ಟಲ್ಲೆಲ್ಲಾ ಜಾರುತ್ತೆ. ಅಷ್ಟೇ ಯಾಕೆ, ಘಾಟಿ ರಸ್ತೆಯಲ್ಲಿ ಅತಿ ವೇಗದಲ್ಲಿ ನಿಮ್ಮ ಕಾರು ಚಲಾಯಿಸುವುದು ಕೂಡಾ ತುಂಬಾ ರಿಸ್ಕೇ. ಕೊಂಚ ಯಾಮಾರಿದ್ರೂ, ಯಮಪುರಿಗೆ ಗೋಲ್ಡ್ ಪಾಸ್ ಸಿಕ್ಕಿಬಿಡುತ್ತೆ. ಅಲ್ಲಿಗೆ ಹೋಗೋದಾದ್ರೆ, ಇನ್ನೊಂದು ತಿಂಗಳು ಕಾಯಿರಿ. ಮಳೆಯ ಆರಂಭದ ಅಬ್ಬರ ಕಡಿಮೆಯಾಗಿರುತ್ತದೆ. ಆದರೆ ಮಳೆ ಪ್ರಮಾಣ ಅಷ್ಟೇ ಇರುತ್ತದೆ. ಕಾಡು ಆಲ್ ಮೋಸ್ಟ್ ಸ್ವಚ್ಛವಾಗಿರುತ್ತದೆ. ಅದೇ ರೈಟ್ ಟೈಂ.

ಕಾಡಿನಲ್ಲಿ ನಡೆಯೋದೇ ರಿಸ್ಕಿ ಅಂದ್ಕೊಂಡ್ರೆ ಬಿಟ್ಟುಬಿಡಿ. ಬೆಳಗ್ಗೆ ಬೆಂಗಳೂರಿನಿಂದ 7 ಗಂಟೆಗೆ ಕಾರವಾರಕ್ಕೆ ಹೊರಡೋ ಟ್ರೈನ್ ಹತ್ತಿಕೊಳ್ಳಿ. ಸಕಲೇಶಪುರ ದಾಟಿದ ಮೇಲೆ ಅಪ್ಪಿ ತಪ್ಪಿ ಕೂಡಾ ಕಣ್ಣು ಮುಚ್ಚಿಕೊಳ್ಳಬೇಡಿ. ಮುಚ್ಚಿದ್ರೆ, ನಿಮಗೆ ಜೀವನದಲ್ಲಿ ಮತ್ತೆಂದಿಗೂ ಸ್ವರ್ಗ ಸಿಗೋದಿಲ್ಲ. ಆದ್ರೆ ಒಂದೇ ಕಂಡೀಷನ್. ನಿಮಗೆ ಪ್ರಕೃತಿಯನ್ನು ಆಸ್ವಾದಿಸೋ ಮನಸ್ಸು ಇರಬೇಕು.



ಟ್ರೇನ್ ಬೇಡ ಅಂದ್ರೆ ಕಾರು ತೆಗೆದುಕೊಂಡು ಹೊರಟುಬಿಡಿ. ಸಕಲೇಶಪುರದಿಂದ ಸ್ವಲ್ಪ ದೂರ ಹೋದರೆ ದೋಣಿಗಲ್ ಸಿಗುತ್ತದೆ. ಅಲ್ಲಿ ಬಿಸಿ ಕಾಫಿಯೋ, ಟೀಯನ್ನೋ ಸೇವಿಸಿ, ಬೋಂಡಾ ಮೆಲ್ಲುತ್ತಾ ಹೊರಟುಬಿಡಿ, ಬೇಕಿದ್ದರೆ ಕೈಯಲ್ಲೊಂದಿಷ್ಟು ಚಿಪ್ಸ್ ಪ್ಯಾಕ್ ಇರಲಿ. ಮುಂದೆ ಬರೀ ಚಳಿ. ಕಣ್ಣುಬಿಟ್ಟರೆ ಕಾಣೋದು ಹಸಿರ ಪಾತಳಿ. ಅದನ್ನು ಮನಸಾರೆ ಅನುಭವಿಸಿ.

ಬೆಂಗಳೂರು ಬಿಟ್ಟರೆ, ಭರ್ತಿ ಮೂರುಗಂಟೆಗೆಲ್ಲಾ ದೋಣಿಗಲ್ ತಲುಪಿಬಿಡುತ್ತೇನೆ. ಅಲ್ಲಿ ಹರಿಯೋ ಸಣ್ಣ ಝರಿಯಲ್ಲಿ ಮುಖಕ್ಕೆ ನೀರು ಚಿಮ್ಮಿಸಿ, ಪಕ್ಕದಲ್ಲೇ ಕಾಫಿ-ಭಜ್ಜಿ ತಿನ್ನುತ್ತಾ 15 ನಿಮಿಷ ಕಳೆದುಬಿಡುತ್ತೇನೆ. ಅಲ್ಲಿಂದಾಚೆಗೆ ನನ್ನ ಕಾರು ಯಾಕೋ ವೇಗ ಒಲ್ಲೆ ಅನ್ನುತ್ತದೆ. ಹೈವೇ ಬದಿ ಸ್ವಲ್ಪ ಗ್ಯಾಪ್ ಕಂಡ್ರೂ ಕಾರು ಸರಕ್ಕನೆ ನಿಂತುಕೊಂಡು ಬಿಡುತ್ತದೆ. 38 ಕಿಲೋಮೀಟರ್ ತಲುಪಲು ಏನಿಲ್ಲವೆಂದರೂ ನಂಗೆ ಮೂರು ಗಂಟೆ ಬೇಕೇ ಬೇಕು. ಇಲ್ಲದಿದ್ರೆ ನನ್ನ ಕಾರು, ಕ್ಯಾಮೆರಾ ಕಣ್ಣು ಎರಡೂ ಠೂ ಬಿಟ್ಟುಬಿಡುತ್ತವೆ !

ಮೊನ್ನೆಮೊನ್ನೆಯಷ್ಟೇ ಮತ್ತೆ ಶಿರಾಡಿ ಮಡಿಲಲ್ಲಿದ್ದೆ. ಧರಣಿಗೆ ಬೆಂಬಿಡದೆ ಮುಂಗಾರಿನ ಅಭಿಷೇಕವಾಗುತ್ತಿತ್ತು. ಅದು ಅಕ್ಷರಶ: ಮಹಾಮಸ್ತಕಾಭಿಷೇಕ. ಒಮ್ಮೆ ಜಿಟಿಜಿಟಿ ಮತ್ತೊಮ್ಮೆ ಧೋ ಧೋ.. ಮತ್ತೆ ಜಿಟಿಜಿಟಿ ಆ ಮೂರು ಗಂಟೆಗಳಲ್ಲಿ ಕೇಳಿಸಿದ್ದು ಅದರದ್ದೇ ಸದ್ದು. ಮೂರು ಗಂಟೆಗಳಲ್ಲಿ ಅದೆಷ್ಟು ಬಾರಿ ನೆಂದಿದ್ದೆನೋ, ಅದೆಷ್ಟು ಬಾರಿ ಮಳೆಯ ಹೊಡೆದ ತಾಳಲಾರದೆ ಕಾರಿನ ಒಳಗೆ ಮುದುಡಿ ಕೂತಿದ್ದೆನೋ… ಅಂತಹದ್ದೊಂದು ಅನುಭವಕ್ಕೆ ಮೈಮರೆತು ತುಂಬಾ ದಿನಗಳೇ ಆಗಿದ್ದವು. ಆ ಮೂರು ಗಂಟೆಗಳು ಒಂದು ವರ್ಷಕ್ಕಾಗುವಷ್ಟು ಹಸಿಹಸಿ ಉತ್ಸಾಹ ತುಂಬಿಕೊಟ್ಟಿದ್ದವು.

ಅದು ಬರೀ ಮುಂಗಾರು ಮಳೆಯಲ್ಲ…  ಜೀವೋತ್ಸವ ಗಾನ.

ಮೈಮನಗಳ ಕೊಂಬೆಯಲ್ಲಿ ಹೊಮ್ಮುವ ದನಿ ಇಂಪು. ನಾಳೆಗೆ ನನಸಾಗುವ ಕನಸಿನ ಹೂವರಳುವ ಕಂಪು.






Friday, June 24, 2016

ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ

ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ
ಟೀಂ ಇಂಡಿಯಾದಲ್ಲಿ ಮತ್ತೆ ಫ್ಯಾಬ್ 5 ಯುಗ

ಆತ ಕ್ರಿಕೆಟ್ ಜಗತ್ತಿನ ದೇವರು. ಭತರ್ಿ ಕಾಲು ಶತಮಾನ ಕಾಲ ಭಾರತೀಯ ಕ್ರಿಕೆಟ್ಟನ್ನು ಅಕ್ಷರಶ: ತನ್ನ ಭುಜದ ಮೇಲೆ ಹೊತ್ತು ಮೆರೆದ. ನೂರು ಕೋಟಿ ಜನರ ನಿರೀಕ್ಷೆಗಳ ಭಾರವನ್ನು ತನ್ನ ವಾಮನ ದೇಹದ ಮೇಲೆ ಹೊತ್ತು ಸಾಗಿದ. ಸಹಸ್ರ ಸಹಸ್ರ ರನ್ ಪೇರಿಸಿ, ಕೋಟಿ ಕೋಟಿ ಜನರ ಸಹಸ್ರ ಸಹಸ್ರ ಆಸೆಗಳನ್ನು ಈಡೇರಿಸಿದ. ಇನ್ಮೇಲೆ ನಾನು ಕ್ರಿಕೆಟ್ ಆಡಲ್ಲ ಎಂದಾಗ, ಕೊನೆಯ ಬಾರಿಗೆ ವಾಂಖೆಡೆ ಮೈದಾನದಿಂದ ಹೊರ ನಡೆದಾಗ ಅದೆಷ್ಟೋ ಲಕ್ಷ ಜನರು ಕ್ರಿಕೆಟ್ ಗೂ ಗುಡ್ ಬೈ ಹೇಳಿದರು. ದೇವರಿಲ್ಲದ ಕ್ರಿಕೆಟ್ ಧರ್ಮವನ್ನೇ ತ್ಯಜಿಸಿದರು. ಸಧ್ಯ ಭಾರತೀಯ ಕ್ರಿಕೆಟ್ ನಲ್ಲಿರುವವರೆಲ್ಲಾ ಆ ದೇವರ ಪರಮ ಭಕ್ತರಷ್ಟೇ.

ಆತ ಸಾಕ್ಷಾತ್ ಶಿವಶಂಕರ. ಬಂಗಾಳದ ವೀರಭದ್ರ. ಎದುರಾಳಿ ಸವಾಲೆಸೆದ್ರು ಸಾಕು, ಮೈದಾನದಲ್ಲಿ ಕಾಣಿಸುತ್ತಿದ್ದದ್ದು ಬರೀ ರೌದ್ರಾವತಾರ. ಮೈದಾನದಾಚೆಯೂ ಶಿವತಾಂಡವಕ್ಕೆ ಕೊರತೆ ಏನೂ ಇರಲಿಲ್ಲ. ಭಾರತೀಯ ಕ್ರಿಕೆಟಿಗರಿಗೆ ಹುಲಿಗಳು ಅಂತಾರೆ. ಆತನ ಕಾಲದಲ್ಲಿ ನಿಜಕ್ಕೂ ಅವರು ಹುಲಿಗಳೇ ಆಗಿದ್ದರು. ಲೀಡರ್ ಎಂದರೆ ಹೀಗೇ ಇರಬೇಕು ಎಂಬಂತೆ ಉದಾಹರಣೆಯಾಗಿ ನಿಂತದ್ದೇ ಆ ರಿಯಲ್ ಟೈಗರ್.

ಮೇಲಿನವರಿಬ್ಬರು ಭೋರ್ಗರೆಯುತ್ತಲೇ ಇದ್ದರು. ಅವರ ಸಿಡಿಲಬ್ಬರಕ್ಕೆ ಜಗತ್ತು ಥರಥರ ನಡುಗಿ ಹೋಗುತ್ತಿತ್ತು. ಜೊತೆಯಾಗಿ ನಿಂತಷ್ಟೂ ಹೊತ್ತು ಎದುರಾಳಿ ಪಾಳಯದಲ್ಲಿ ನೆಮ್ಮದಿ ಸುಳಿಯುತ್ತಲೇ ಇರಲಿಲ್ಲ. ಥ್ಯಾಂಕ್ ಗಾಡ್ ! ಅವರ ಉತ್ತುಂಗದ ಕಾಲದಲ್ಲಿ ಟಿ-20 ಕ್ರಿಕೆಟ್ ಹುಟ್ಟಿರಲಿಲ್ಲ. ಇದ್ದಿದ್ದರೆ, ಕ್ರಿಕೆಟ್ ಲೋಕದಲ್ಲಿ ಪ್ರಳಯ ಸೃಷ್ಟಿಯಾಗುತ್ತಿತ್ತು ! ಬೌಲಿಂಗ್ ಮಾಡಲು ಯಾರೂ ಇರುತ್ತಿರಲಿಲ್ಲ.

ಆತ ಗೋಡೆ. ಎಂತಹಾ ಬಿರುಗಾಳಿ, ಸಿಡಿಲಿನ ವೇಗದ ಬೌಲರ್ಗಳಿಗೂ ಹಿಮಾಲಯದಷ್ಟೇ ತಣ್ಣಗೆ ಅಡ್ಡ ನಿಂತ ಮಹಾ ಗೋಡೆ. ಒಂದರ್ಥದಲ್ಲಿ ಆತ ಭಾರತೀಯ ಕ್ರಿಕೆಟ್ ನ ಯುಗ ಪ್ರವರ್ತಕ. ಆತ ಭೋರ್ಗರೆಯುತ್ತಿರಲಿಲ್ಲ. ಸಮುದ್ರದ ಅಲೆಗಳಂತೆ ಶಾಂತವಾಗಿಯೇ ಅಪ್ಪಳಿಸುತ್ತಿದ್ದ. ಕ್ರೀಸಿನಲ್ಲಿದ್ದಷ್ಟೂ ಹೊತ್ತು ಮ್ಯಾಚ್ ಭಾರತದ ಕೈ ಜಾರುತ್ತಲೇ ಇರಲಿಲ್ಲ.

ಆತ ಬ್ಯಾಟ್ ಬೀಸುತ್ತಿದ್ದಷ್ಟೂ ಹೊತ್ತು ಮೈದಾನದಲ್ಲಿ ಅರಳುತ್ತಿದ್ದದ್ದು ಬರೀ ರಂಗವಲ್ಲಿಯಷ್ಟೇ. ಅಂತಹ ಕಲಾತ್ಮಕ ಮತ್ತೊಬ್ಬ ಆಟಗಾರ ಜಾಗತಿಕ ಕ್ರಿಕೆಟ್ ಗೆ ಮತ್ತೊಬ್ಬ ಸಿಕ್ಕಿಲ್ಲ. ಆ ಸ್ಟೈಲಿಶ್ ಆಟಗಾರ ಕ್ರಿಕೆಟ್ ನ ಘಟಾನುಘಟಿ ಬೌಲರ್ ಗಳಿಗೇ ಸವಾಲಾಗಿದ್ದ. ಅದರಲ್ಲೂ ಅತಿರಥರೆನಿಸಿದ ಕ್ಯಾಂಗರೂಗಳ ಪಾಲಿಗೆ ಆತ ಬಿಡಿಸಲಾರದ ಒಗಟೇ ಆಗಿಬಿಟ್ಟಿದ್ದ.

ವಿಕೆಟ್ ಬಿಟ್ಟುಕೊಡೋದ್ರಲ್ಲಿ ಮೇಲಿನ ಇಬ್ಬರೂ ಜಿಪುಣಾಗ್ರೇಸರರೇ. ಇಬ್ಬರೂ ಜೊತೆಯಾಗಿ ಪೈಪೋಟಿಗೆ ನಿಂತರೆ, ಮೈದಾನವಿಡೀ ಎದುರಾಳಿ ಬೌಲರ್ ಗಳ ಬೆವರಿನಿಂದ ಒದ್ದೆ ಒದ್ದೆ.

ಈ ಎರಡೂ ಸಾಲಿಗೆ ಸೇರದ ಮತ್ತೊಬ್ಬ ಅಗ್ರೇಸರನಿದ್ದ. ಎಲ್ಲರೊಳಗೊಂದಾಗದೇ ಇದ್ದುಕೊಂಡು, ಸದ್ದೇ ಇಲ್ಲದೆ ಸುದ್ದಿ ಮಾಡಿದ್ದ. ದವಡೆ ಮುರಿದರೂ ಮೈದಾನಕ್ಕೆ ಇಳಿದು ಒಂಟಿ ಸಲಗದಂತೆ ಕಾದಾಡಿದ್ದ. ದಾಯಾದಿ ವೈರಿಯ ಎಲ್ಲಾ ಹತ್ತು ವಿಕೆಟ್ ಗಳನ್ನು ಕಿತ್ತು ಮೆರೆದ ಸ್ಪಿನ್ ಬೌಲಿಂಗ್ ನ ಸಾರ್ವಭೌಮ ಆತ. ತಮ್ಮ ದೊಡ್ಡ ಪಾದಗಳಷ್ಟೇ ದೊಡ್ಡ ಮನಸ್ಸು ಹೊಂದಿರೋ ಜಂಬೋ ಆತ. ಹಿಂದೂ ಮಹಾಸಾಗರದಷ್ಟೇ ಪ್ರಶಾಂತ.

ಆಲ್ ಮೋಸ್ಟ್ ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್ ಎಂದರೆ ಆ ಐವರೇ. ಸಚಿನ್, ಗಂಗೂಲಿ, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ. ಫ್ಯಾಬ್ 5 ಅಂತಾನೇ ಫೇಮಸ್. ಅವರಿದ್ದ ಕಾಲ ಭಾರತೀಯ ಕ್ರಿಕೆಟ್ ನ ಉತ್ತುಂಗದ ಕಾಲವೂ ಆಗಿತ್ತು. 2011ರ ವಿಶ್ವಕಪ್ ಗೆದ್ದ ಬಳಿಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದರು. ಭಾರತಕ್ಕೆ ಮರಳಿ ವಿಶ್ವಕಪ್ ತರುವುದು ಅವರ ಜೀವಮಾನದ ಕನಸಾಗಿತ್ತು. ಸಚಿನ್ ಬಿಳಿ ಪ್ಯಾಂಟು, ಷಟರ್ು ಕಳಚಿಡೋ ಮೂಲಕ ಫ್ಯಾಬ್ -5 ಯುಗಾಂತ್ಯ ಕಂಡಿತು. ಅದಾದ ಬಳಿಕ, ಟೀಂ ಇಂಡಿಯಾ ಒಂದೇ ಒಂದು ಜಾಗತಿಕ ಟೂನರ್ಿ ಗೆದ್ದಿಲ್ಲ ಎನ್ನುವುದು ಸತ್ಯ.

ಕಾಲ ಚಕ್ರ ಮತ್ತೆ ಮತ್ತೆ ಸುತ್ತು ಹಾಕುತ್ತಂತೆ. ಆದರೆ ಭಾರತೀಯ ಕ್ರಿಕೆಟ್ ನ ಪಾಲಿಗೆ ಕಾಲ ಚಕ್ರ ತುಂಬಾ ಬೇಗನೇ ಒಂದು ಸುತ್ತು ಹಾಕಿ ಬಂದಿದೆ. ಭಾರತೀಯ ಕ್ರಿಕೆಟ್ ನ ರಥ ಎಳೆದ ಐವರು ಮಹಾನ್ ಕ್ರಿಕೆಟಿಗರು ಮತ್ತೆ ಒಂದಾಗಿದ್ದಾರೆ. ಕುಂಬ್ಳೆ ಮತ್ತೊಮ್ಮೆ ಜಂಬೋ ಸವಾರಿಗೆ ಸಿದ್ದರಾಗಿ ಬಂದಿರುವುದರೊಂದಿಗೆ ಮತ್ತೆ ಫ್ಯಾಬ್ -5 ಯುಗ ಆರಂಭವಾಗತೊಡಗಿದೆ.

ಇವರು ಕ್ರಿಕೆಟ್ ಬಿಟ್ಟರೂ, ಕ್ರಿಕೆಟ್ ಇವರನ್ನು ಬಿಡೋದಿಲ್ಲ. ದೇವರು ಮತ್ತೆ ಕಾಣಸಿಗದೇ ಹೋಗಬಹುದು. ಆದರೆ ದೇವರನ್ನು ಪೂಜಿಸದೇ ಇರಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್ ಮೊದಲು ಸೆಳೆದುಕೊಂಡಿದ್ದೇ ರಾಹುಲ್ ದ್ರಾವಿಡ್ ರನ್ನು. ಭಾರತದ ಮಹಾಗೋಡೆ ಈಗ ಮರಿಹುಲಿಗಳನ್ನು ತಯಾರಿಸೋ ದ್ರೋಣಾಚಾರ್ಯರಾಗಿದ್ದಾರೆ. ಭಾರತೀಯ ಕ್ರಿಕೆಟ್ ನ ಭವಿಷ್ಯ ಈಗ ದ್ರಾವಿಡ್ ಕೈಯಲ್ಲಿ ಸುರಕ್ಷಿತವಾಗತೊಡಗಿದೆ. ಸಚಿನ್ ಬಿಟ್ಟ ಬಳಿಕ ಬಿಸಿಸಿಐ ನಲ್ಲೂ ಬಹಳಷ್ಟು ನೀರು ಹರಿದಿದೆ. ಹಳೇ ರಕ್ತವೆಲ್ಲಾ (ಕೆಟ್ಟದ್ದು ಇದ್ದಿರಲೂ ಬಹುದು) ಬೆಟ್ಟಿಂಗ್ ಪ್ರವಾಹಕ್ಕೆ ಕೊಚ್ಚಿ ಹೋಗಿ, ಹೊಸ ರಕ್ತ ಹರಿದು ಬಂದಿದೆ. ಇಂತಹ ಸಮಯದಲ್ಲೇ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಓಪನಸರ್್ ಭಾರತೀಯ ಕ್ರಿಕೆಟ್ ಗೆ ಹೊಸ ಓಪನಿಂಗ್ ಕೊಡಲು ಕೈ ಜೋಡಿಸಿಬಿಟ್ಟರು. ಸಚಿನ್, ಗಂಗೂಲಿ ಜೊತೆಗೆ ಲಕ್ಷ್ಮಣ್ ಕೂಡಾ ಭಾರತೀಯ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸೇರಿಕೊಂಡು, ಕ್ರಿಕೆಟ್ ಗೆ ಹೊಸ ದಿಕ್ಕು ನೀಡಲಾರಂಭಿಸಿದ್ದರು. ಜಂಬೋ ಮಾತ್ರ ಕನರ್ಾಟಕ ಕ್ರಿಕೆಟ್ ಆಡಳಿತ, ಬಿಸಿಸಿಐನ ತಾಂತ್ರಿಕ ಸಮಿತಿ ಆಮೇಲೆ ಐಸಿಸಿ ಕೆಲಸ ಅಂತ ಕೊಂಚ ದೂರವೇ ಇದ್ದರು.

ಈಗ ಜಂಬೋ ಕೂಡಾ ಮತ್ತೆ ಭಾರತೀಯ ಕ್ರಿಕೆಟ್ ನ ಭಾಗವಾಗಿದ್ದಾರೆ. ಇನ್ನೇನು ಧೋನಿ ನಿರ್ಗಮಿಸೋ ದಿನಗಳೂ ಆಸುಪಾಸಿನಲ್ಲೇ ಇವೆ. ಅಲ್ಲಿಗೆ ಸಚಿನ್ ನಂತರದ ಮೂರು ಪೀಳಿಗೆ ಕ್ರಿಕೆಟ್ ನ ತೆರೆ ಮರೆಗೆ ಸರಿಯಲಿದೆ. ಕೊಹ್ಲಿ ನೇತೃತ್ವದಲ್ಲಿ ಉದಯೋನ್ಮುಖ ಆಟಗಾರರೇ ಭಾರತೀಯರ ಆಸೆಗಳನ್ನು ಹೊತ್ತು ಸಾಗಬೇಕಿದೆ. ಹೆಚ್ಚು ಕಮ್ಮಿ ಮುಂದಿನ ವರ್ಷ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ಹೀಗಾದಲ್ಲಿ, ನೇಪಥ್ಯದಲ್ಲೇ ಜೊತೆಯಾಗೋ ಈ ಫ್ಯಾಬ್ -5 ಮತ್ತೆ ಹೊಸ ಭಾರತದ ನೇತೃತ್ವ ವಹಿಸಲಿದ್ದಾರೆ. ಭಾರತೀಯ ಕ್ರಿಕೆಟ್ ನ ಭವಿಷ್ಯ ಮತ್ತೆ ಫ್ಯಾಬ್ 5 ಹೆಗಲಿಗೇರಿರುವುದು ಅಭಿಮಾನಿಗಳ ಪಾಲಿಗಂತೂ ದೀಪಾವಳಿಯಾಗಿದೆ. ಇತ್ತ ಕ್ರಿಕೆಟ್ ಗೆ ಹೊಸ ದೇವರೂ ಹುಟ್ಟಿಕೊಂಡಿದ್ದಾರೆ. ಜಂಬೋ ಸವಾರಿ ಕೆರಿಬಿಯನ್ ನಿಂದ ಆರಂಭವಾಗಲಿದೆ.